ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ 'ಮೂಕಜ್ಜಿಯ ಕನಸುಗಳು':
ಶಿವರಾಮ ಕಾರಂತರ ಕಾದಂಬರಿಗಳನ್ನು ವಿಮರ್ಶೆ ಮಾಡುವವವರಿಗೆ ಕೇವಲ ಸಾಹಿತ್ಯ ಜ್ಞಾನ ಇದ್ದರೆ
ಸಾಲದು, ಅದಕ್ಕೆ ಅಪಾರ ಜೀವನಾನುಭವ ಜೊತೆಗೆ ಸಂಸ್ಕಾರ ಬಲ ಅತ್ಯಗತ್ಯ. ವಿಮರ್ಶೆಯ ಎಟುಕಿಗೆ
ಮೀರಿದ ಕೃತಿ ರಚನೆಯಲ್ಲಿ ಕಾರಂತರು ಸಿದ್ಧಹಸ್ತರು. ಮೂಕಜ್ಜಿಯ ಕನಸುಗಳು ಅಂತದ್ದರಲ್ಲಿ
ಒಂದು. ಭಾರತೀಯ ಪರಂಪರೆಯಲ್ಲಿ ಸಾವಿರಾರು ವರ್ಷಗಳಿಂದ ತಳವೂರಿದ್ದ  ನಂಬಿಕೆಗಳನ್ನು,
ಸಂಪ್ರದಾಯವಾದಿ ಆಚರಣೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ವಿಮರ್ಶಿಸುವ ಈ ಕಾದಂಬರಿ, ಕಾರಂತರ
ಕಾದಂಬರಿಗಳಲ್ಲೇ ಅತ್ಯಂತ ವಿಶಿಷ್ಟವಾದದ್ದು. ಹಾಗಾದರೆ ಯಾರು ಈ ಮೂಕಜ್ಜಿ? ಕಾರಂತರೇ
ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ‘ಸಾಂಪ್ರದಾಯಿಕತೆಯಿಂದ ಹೆಪ್ಪುಗಟ್ಟಿದ ಮನಸ್ಸುಗಳನ್ನು
ತುಸುತುಸುವಾಗಿ ಕಾಯಿಸಿ ಕರಗಿಸುವ ಕೆಲಸ ಅವಳದ್ದು. ಅಂತ ಅಜ್ಜಿಯೊಬ್ಬಳು ಇದ್ದಳೇ ಎನ್ನುವ
ಸಂಶಯ ಬಂದರೆ, ನಮ್ಮ ಸಂಸ್ಕೃತಿಯ, ನಂಬುಗೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು
ತಿಳಿದರಾಯಿತು. ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ. ಪ್ರಾಮಾಣಿಕ ಸಂದೇಹದ ರೂಪದಲ್ಲಿ
ಬದುಕಿಕೊಂಡೆ ಇದ್ದಾಳೆ’. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿಯ ಬಗ್ಗೆ ಹೆಚ್ಚೇನು
ಬರೆಯುವುದಕ್ಕಿಂತ ನಮ್ಮಲ್ಲಿನ ವಿಚಾರ-ವಿವೇಕ ಬೆಳೆಸುವಂತಹ ಮೂಕಜ್ಜಿ ಹೇಳುವ ಒಂದಷ್ಟು
ಮಾತುಗಳನ್ನು ನೆನೆಯೋಣ.

“ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು ಓಡಾಡಿಕೊಂಡಿರುವ
ಕಟ್ಟೆ ಬಾಳಿನ ಕಟ್ಟೆಯಲ್ಲವೇ?”

“ಗುಡಿಯೂ ಶಾಶ್ವತವಲ್ಲ; ಅಲ್ಲಿನ ದೇವರೂ ಶಾಶ್ವತವಲ್ಲ. ಒಬ್ಬ ಶಾಶ್ವತವಾದ ದೇವರು
ಇದ್ದನೆಂದರೂ, ಅವನು ಎಂಥವನೆಂದು ನಮ್ಮ ಎಟುಕಿಗೆ ಸಿಕ್ಕಿದ್ದಿಲ್ಲ. ನಾವು ನಮ್ಮ ನಮ್ಮ
ಬುದ್ಧಿಗೆ ಸಮನಾಗಿ, ನೂರು, ಸಾವಿರಗಟ್ಟಲೆ ದೇವರನ್ನು ಮಾಡಿಕೊಂಡು ‘ಇದೇ ನಿಜ’ ‘ಅದೇ ನಿಜ’
ಎಂತ ಮರುಳು ಮಾತನಾಡಿದವರು. ಸಂಕಟ ಬಂದಾಗೆಲ್ಲ ಅಂತ ದೇವರ ಹತ್ತಿರ ಹೋಗಿ ‘ಅದನ್ನು ಕೊಡು,
ಇದನ್ನು ಕೊಡು’ ಎಂದು ಬೇಡಿದವರು.”

“ಹೆರುವುದು ಅಸಹ್ಯವಲ್ಲ; ಇರುವುದು ಅಸಹ್ಯವಲ್ಲ; ಸಾಯುವುದೂ ಅಲ್ಲ, ಹುಟ್ಟಿಸುವುದು
ಅಸಹ್ಯವೇ? ಗಂಡು ಹೆಣ್ಣುಗಳನ್ನು ಒಟ್ಟಿಗೆ ಬೆಸೆದು, ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ
ಸುಖಕ್ಕೋ, ದು:ಖಕ್ಕೋ ಒಂದುಗೂಡಿಸುವ ಶಕ್ತಿ ಅಸಹ್ಯವೇ?”

“ದೇವರು(?) ಕೊಟ್ಟ ಆಯುಷ್ಯವನ್ನು ಇದ್ದಷ್ಟು ಕಾಲ ಉಳಿದ ಮಕ್ಕಳ ಜೊತೆ ಬಾಳಿ ಬದುಕುವುದೇ
ಪೂಜೆ ಎಂಬ ಬುದ್ದಿ ಯಾಕೆ ಬರಬಾರದು ನಮಗೆ?”

“ಹುಟ್ಟಿ ಬಂದಿದ್ದೇವೆ, ಕೈ, ಮೂಗು, ಬಾಯಿ, ಪಡೆದು. ಅವೆಲ್ಲ ಇರುವುದು ಯಾತಕ್ಕೆ?
ಕಚ್ಚಲಿಕ್ಕೆ ಹುಲಿಯ ‘ಬಾಯಿ ಕೊಡು’, ಹೊರಲಿಕ್ಕೆ ಆನೆಯ ‘ಮೈ ಕೊಡು’, ನುಸುಳಲಿಕ್ಕೆ ನುಸಿಯ
‘ಶರೀರ ಕೊಡು’ ಅಂದರೆ ಹೇಗಾದೀತು? ಎಲ್ಲರಿಗೆ ಎಲ್ಲವೂ ಬೇಕಾದರೆ ಅವನು ಕೊಡುವುದಾವುದು
ಎಲ್ಲಿಂದ? ಅವನೇ ನಮ್ಮನ್ನು ಹುಟ್ಟಿಸಿದ್ದಾನೆ ಎಂತ ತಿಳಿಯುವುದಾದರೆ, ಕೊಡುವಷ್ಟನ್ನು
ಕೊಟ್ಟೀ ಹುಟ್ಟಿಸಿದ್ದಾನೆ – ಎಂತ ತಿಳಿಯಬೇಕು.”

“ಹೆಂಡತಿ ಮಕ್ಕಳನ್ನು ಬಿಟ್ಟರು ದಾಸರು. ವಿಠಲನನ್ನು, ನಾರಾಯಣನನ್ನು ನಂಬಿ ಹಾಡಿದರು.
ನಂಬಿದ್ದೆ ನಂಬಿದ್ದು ಹಾಡಿದ್ದೆ ಹಾಡಿದ್ದು .ಅವರು ತಮ್ಮ ಹೆಂಡಿರನ್ನು ದಾರಿ ಮೇಲೆ ಕೆಡೆದು
ಹೋದದ್ದು ನಿಜ. ಹಾಗೆ ಮಾಡಿ ಬೇಡಿದ್ದು ಯಾರನ್ನು?ತಂತಮ್ಮ ಹೆಂಡಿರೊಡನೆ ಸುಖವಾಗಿ
ವೈಕುಂಠದಲ್ಲೋ, ಕೈಲಾಸದಲ್ಲೋ ಇರುವಂಥ ವಿಷ್ಣುವನ್ನು ,ಶಿವನನ್ನು. ಅವರೇನು ಕೊಟ್ಟಾರು?
ಅವರಿಗೂ ಅವರ ಹೆಂಡಂದಿರಿಂದ ಮುಕ್ತಿ ಸಿಗದೇ ಇರುವಾಗ ?”

“ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು
ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು
ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ
ಇರಿಸಿದ್ದಾನಲ್ಲ. ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು
ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ
ಉತ್ತರವನ್ನು ಹೇಳಿಕೊಳ್ಳುತ್ತೇವೆ. ನಮಗೆ ಇಷ್ಟ ಕಂಡಂತೆ ನಡೆದಾಗ ದೇವರ ಇಚ್ಛೆ ಅನ್ನುತ್ತೇವೆ
. ಅನಿಷ್ಟ ಪ್ರಾಪ್ತಿಸಿದಾಗ ಅನಿಷ್ಟ ಎನ್ನುತ್ತೇವೆ. ದೇವರು (?) ಕೊಟ್ಟ ಆಯುಷ್ಯವನ್ನು
ಇದ್ದಷ್ಟು ಕಾಲ ಉಳಿದ ಮಕ್ಕಳ ಜೊತೆ ಬಾಳಿ ಬದುಕುವುದೇ ಪೂಜೆ ಎಂಬ ಬುಧ್ಧಿ ಯಾಕೆ ಬರಬಾರದು
ನಮಗೆ?”

“ಅರ್ಜುನನಿಗೆ ಕೃಷ್ಣ ಪರಮಾತ್ಮ ಅಷ್ಟು ದೊಡ್ಡ ಭಗವದ್ಗೀತೆ ಹೇಳಿದ ಅನ್ನುತ್ತಾರೆ;
ಹೇಳಿದ್ದೆಲ್ಲಿ? ಕುರುಕ್ಷೇತ್ರದಲ್ಲಿ; ಧರ್ಮರಾಜ, ಕೌರವ, ಯುಯುಧಾನ, ಸಾತ್ಯಕಿಗಳು ಅವರವರ
ಶಂಖಗಳನ್ನು ಅವರವರು ಊದಿದ ಮೇಲೆ ಇನ್ನೇನು? ಯುಧ್ಧ ತೊಡಗಿತು ಅನ್ನುವಾಗ ಅಲ್ಲಿ ಕೃಷ್ಣ ಮೂರು
ದಿನಗಳ ಹರಿಕಥೆಯನ್ನು ಒಬ್ಬ ಅರ್ಜುನನ ಮುಂದೆ ನಡೆಸಿದ ಅಂದರೆ ಆಗ ಉಳಿದವರೆಲ್ಲರೂ ಏನು
ಮಾಡಿದರೋ? ಯುಧ್ಧವನ್ನು ಬಿಟ್ಟು ಮನೆಗೆ ಹೋಗಿ, ತಿರುಗಿ ಅಲ್ಲೆಗೆ ಬಂದರೋ?”

“ನಮ್ಮ ಹಾಗೆಯೇ ಸಾವಿರ, ಸಾವಿರ ಅಲ್ಲ, ಕೋಟಿ, ಕೋಟಿ ಪ್ರಾಣಿಗಳಿವೆ. ಅವು ಯಾವುದಾದರೂ,
ಯಾರನ್ನಾದರೂ ಬೇಡುವುದನ್ನು ಕಂಡಿದ್ದೀಯಾ? ಮತ್ತೆಲ್ಲ ಬಿಡು- ಅವು ತಮ್ಮ ಅನ್ನವನ್ನು
ಬೇಡುವುದಿಲ್ಲ; ಮಲಗಲು ತಾವನ್ನೂ ಬೇಡುವುದಿಲ್ಲ; ಹುಲ್ಲೆಯೆದುರಿಗೆ ಹುಲಿ ಬಂದರೆ ‘ಸಹಾಯ
ಮಾಡು’ ಎಂತಲೂ ಬೇಡುವುದಿಲ್ಲ. ಬುದ್ಧಿ ಬಂದ ಮನುಷ್ಯ ಅದಕ್ಕಿಂತಲೂ ಕಳಪೆಯಾದರೆ ಹೇಗೆ?”

ಸಾವನ್ನು ವಾಸ್ತವಿಕ ನೆಲೆಯಲ್ಲಿಯೇ ಕಾಣುವ ದಿಟ್ಟೆ. ಸುಬ್ರಾಯನ ತಂದೆ ಸತ್ತ ಸಂದರ್ಭದಲ್ಲಿ
ಅಳುತ್ತಿದ್ದ ಸುಬ್ರಾಯನಿಗೆ ಅವರು ಹೇಳುವ ಮಾತುಗಳು, “ಇದೇ ಏನು ನಿನ್ನ ಗಂಡಸುತನ ? ನೀನೇನು
ನಾನೇನು, ಯಾರೇನು? ಯಾರು ಶಾಶ್ವತ? ಹೋಗಿ ಕೊಳ್ಳಿ ಇಟ್ಟು ಉರಿಸಿ ಬಾ. ಇದೆಲ್ಲ ಒಂದು ಆಟ.
ಕನಸು ಅಂದರೆ ಕನಸು. ನಾವು ಕಟ್ಟಿಕೊಂಡ ಹಾಗಿರುತ್ತದೆ ಕನಸು. ಒಳ್ಳೆಯದು ಎ0ದರೆ ಒಳ್ಳೆಯದು.
ಕೆಟ್ಟದು ಅಂದರೆ ಕೆಟ್ಟದು. ಇದು ಭ್ರಮೆ ಎಂದರೆ ಭ್ರಮೆ. ನಿಜ ಅಂದರೆ ನಿಜ. .. ನಿನಗೆ
ಹೇಳುತ್ತೇನೆ. ನಮಗೆ ಕನಸು ಗಿನಸು ಎಂಬುದಿರುವಾತನಕವೂ ಅದು ಅಷ್ಟೇ ನಿಜ. ಸಂಸಾರವೂ ಹಾಗೆಯೇ.
ಸುಖ ದುಖಃಗಳೂ ಹಾಗೆಯೇ. ದೇವರೂ ಹಾಗೆಯೇ ದಿಂಡರೂ ಹಾಗೆಯೇ. ಅವು ಎಲ್ಲವೂ ನಾವು ಕಟ್ಟಿಕೊಂಡ
ಹಾಗೆ. ಗಟ್ಟಿ ಮಾಡಿಕೋ ಮನಸ್ಸು”

ಈ ರೀತಿಯಾಗಿ ಅಜ್ಜಿಯಾಡುವ ಮಾರ್ಮಿಕ, ಅರ್ಥಪೂರ್ಣ ಮಾತುಗಳನ್ನು ಹೇಳುತ್ತ ಹೋದರೆ ಅದಕ್ಕೆ
ಕೊನೆ ಮೊದಲಿಲ್ಲ. ಅದಕ್ಕೆ ನೀವು ಕಾದಂಬರಿಯನ್ನೇ ಓದಬೇಕು. ಪ್ರತಿ ಮಾತು, ಹೇಳಿಕೆಗಳೂ
ಓದುವವನ ಮನದಲ್ಲಿ ಅಚ್ಚೊತ್ತುವಂತವೇ. ಕಾದಂಬರಿ ಓದಿ ಮುಗಿಸುವಷ್ಟರಲ್ಲಿ ಒಂದು ಮಾತಂತೂ
ಸ್ಪಷ್ಟವಾಗುತ್ತದೆ. ಜಿ. ಶಿವರುದ್ರಪ್ಪರವರು ಹೇಳಿರುವಂತೆ; ಕಾರಂತರು, ಯಾರೋ ಸಿದ್ಧಪಡಿಸಿ
ಇರಿಸಿದ ತೀರ್ಮಾನಗಳಿಂದ ಬದುಕನ್ನು ಒಪ್ಪಿಕೊಳ್ಳುವವರೋ ಅಥವಾ ಯಾವುದೋ ಸಾಮಾಜಿಕ
ಕಟ್ಟುಪಾಡುಗಳಿಗೆ ಒಳಗಾದವೊರೊ ಅಲ್ಲ. ಅವರೊಬ್ಬ ವಿಚಾರವಾದಿ, ದಾರ್ಶನಿಕ. ಕಾರಂತರು ಬದುಕಿನ
ಸಮಸ್ತ ಅನುಭವಗಳಿಗೆ ತಮ್ಮನ್ನು ಒಡ್ಡಿಕೊಂಡವರು. ಅದರ ಸಂಘರ್ಷಗಳಿಂದ ಬೆಳೆದವರು. ಅದರ
ವಾಸ್ತವಿಕ ಅನುಭವವೇ ಅವರ ಪಾಲಿಗೆ ಒಂದು ಪುಸ್ತಕ. ಅತ್ಯಂತ ಪ್ರಾಮಾಣಿಕತೆಯಿಂದ,
ತೀವ್ರತೆಯಿಂದ ಬದುಕಿನೊಂದಿಗೆ ತಮ್ಮನ್ನು ತೊಡಗಿಸಿಕೊಂಡವರು ಅವರು. ಈ ವಾಸ್ತವದ ನೆಲೆಯಮೇಲೆ
ಗಟ್ಟಿಯಾಗಿ ನಿಂತು, ಅದರೊಳಗಿನ ಹಾಗೂ ಅದರಾಚೆಯ ಗೂಢವನ್ನು ಅತ್ಯಂತ ಆಳವಾಗಿ
ಅನ್ವೇಷಿಸಿದವರು. ಸರ್ವಕಾಲಕ್ಕೂ ಸಲ್ಲುವ ಸದ್ವಿಚಾರ ತುಂಬಿರುವ ಈ ಕಾದಂಬರಿ ಪ್ರತಿಯೊಬ್ಬರೂ
ಓದಲೇ ಬೇಕಾದ ಕೃತಿ.

– ಆದರ್ಶ ಕೃಷ್ಣಭಟ್

೩. ಮೂಕಜ್ಜಿಯ ಕನಸುಗಳು (೧೯೬೮)
Mookajjiya Kanasugalu – Dr. K. Shivarama Karantha

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to