http://m.vijaykarnataka.com/state/vk-special/VK-Special-C-V-Raman-Today-National-Science-Day/articleshow/51172165.cms
*ಅನುದಿನವೂ ವಿಜ್ಞಾನ ದಿನವಾಗಲಿ!* Feb 28, 2016, 04.00 AM IST Whatsapp <javascript:void(0);>Facebook <javascript:void(0);>Google Plus <javascript:void(0);>Twitter <javascript:void(0);>Email <javascript:void(0);> C-V-Raman AAA ಇಂದು ರಾಷ್ಟ್ರೀಯ ವಿಜ್ಞಾನ ದಿನ. ವಿಶ್ವ ವಿಖ್ಯಾತ ವಿಜ್ಞಾನಿ ಸರ್. ಸಿ.ವಿ. ರಾಮನ್, ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದ ದಿನ. ಮಾನವನ ಏಳ್ಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ವಹಿಸುತ್ತಿರುವ ಮಹತ್ತರ ಪಾತ್ರವನ್ನು ಗುರುತಿಸಿ, ಆ ವಲಯಕ್ಕೆ ಮತ್ತಷ್ಟು ಬಲತುಂಬುವ, ಸಂಶೋಧನಾ ರಂಗದಿಂದ ವಿಮುಖರಾಗುತ್ತಿರುವ ಪೀಳಿಗೆಯನ್ನು ವಿಜ್ಞಾನಮುಖಿಯಾಗಿಸುವ ಕೆಲಸ ಆಗಬೇಕಿದೆ. ----- * ಸುಧೀಂದ್ರ ಹಾಲ್ದೊಡ್ಡೇರಿ ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟು ಹದಿನಾರು ವರ್ಷಗಳು ಉರುಳಿವೆ. ಕಳೆದೊಂದು ಶತಮಾನದತ್ತ ಅವಲೋಕಿಸಿದಾಗ ನಿಚ್ಚಳವಾಗಿ ಕಂಡುಬರುವುದು ವಿಜ್ಞಾನದೊಂದಿಗೆ ನಡೆದ ಅನುಸಂಧಾನದ ಚರಿತ್ರೆಯೇ. ವಿಜ್ಞಾನದ ಜತೆಗಿನ ಈ ಅನುಸಂಧಾನ ಮಾನವ ಚಿಂತನೆಯ ದಿಕ್ಕನ್ನೇ ಬದಲಿಸಿದೆ. ವಿಜ್ಞಾನ ಸಂಶೋಧನೆಗಳು, ಚಿಂತನೆಗಳು, ಅವುಗಳಿಂದ ಮೂಡಿದ ತಂತ್ರಜ್ಞಾನ ಹೊಸ ಸಂಸ್ಕೃತಿಯ ಹುಟ್ಟಿಗೆ ನಾಂದಿ ಹಾಡಿವೆ. ಮನುಕುಲದ ಇತಿಹಾಸದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದಷ್ಟು ವೈಜ್ಞಾನಿಕ ಪ್ರಗತಿ ಇನ್ಯಾವ ಕಾಲದಲ್ಲಿಯೂ ನಡೆದಿಲ್ಲ. ಈ ಪ್ರಗತಿಯ ಬಗ್ಗೆ ಮಾತನಾಡುವಾಗ ಕೂಡಲೇ ನಮ್ಮ ನೆನಪಿಗೆ ಬರುವುದು ಅದು ಕೊಟ್ಟಿರುವ ಐಹಿಕ ಸುಖಸಾಧನಗಳು. ಅದು ಮಿಂಚಿನ ವೇಗದ ವಿಮಾನ - ಅಂತರಿಕ್ಷ ಶಟಲ ಪಯಣವಾಗಿರಬಹುದು. ಇಲ್ಲವೆ ಜಗತ್ತನ್ನೇ ಒಂದು ಪುಟ್ಟ ಹಳ್ಳಿಯಾಗಿಸಿಬಿಟ್ಟಿರುವ ಟೆಲಿಫೋನ್-ಇಂಟರ್ನೆಟ್ ಸಂಪರ್ಕವಿರಬಹುದು. ಅಥವಾ ಕಣ್ಣು ಮಿಟಕಿಸುವಷ್ಟರಲ್ಲಿ ಮೇಲೇರುತ್ತಾ ಕೃತಕ ಉಪಗ್ರಹವೊಂದನ್ನು ಉಡ್ಡಯಿಸಿರುವ ರಾಕೆಟ್ ಆಗಿರಬಹುದು. ಹೀಗೆ ಕಳೆದೊಂದು ಶತಮಾನದಿಂದ ಮೂಲ ವಿಜ್ಞಾನ ಮತ್ತದಕ್ಕೆ ಪೂರಕವಾಗಿರುವ ತಂತ್ರಜ್ಞಾನ ನಮ್ಮೆಲ್ಲರ ಕಲ್ಪನೆಯನ್ನೂ ಮೀರಿ ಬೆಳೆಯುತ್ತಿದೆ. ವಿಜ್ಞಾನ ನೇರವಾಗಿ, ಹಲವು ಬಾರಿ ಪರೋಕ್ಷವಾಗಿ ಇಪ್ಪತ್ತನೆಯ ಶತಮಾನದ ರಾಜಕೀಯ ವಿಪ್ಲವಗಳಿಗೆ, ಸಾಮಾಜಿಕ ಪಲ್ಲಟಗಳಿಗೆ, ಜಾಗತಿಕ ಆರ್ಥಿಕ ಏಳು-ಬೀಳುಗಳಿಗೆ ಕಾರಣವಾಗಿದೆ. ಒಟ್ಟಾರೆಯಾಗಿ ವಿಜ್ಞಾನ ಮಾನವನ ಬೌದ್ಧಿಕ ಚಿಂತನೆಯ ವಿಧಾನವನ್ನೇ ಬದಲಾಯಿಸಿದೆ. ಈ ಅಗಾಧ ವಿಶ್ವದಲ್ಲಿ ಸದ್ಯಕ್ಕೆ ಗುರುತಿಸಿರುವಂತೆ ಜೀವಿಗಳಿರುವ ಏಕೈಕ ಗ್ರಹ ನಮ್ಮ ಭೂಮಿ. ಈ ಭೂಮಿ ತನ್ನದೇ ಅಕ್ಷದಲ್ಲಿ ಸುತ್ತುವ ವೇಗವನ್ನು ಭೂಮಧ್ಯ ರೇಖೆಯ ಹತ್ತಿರ ಅಳೆದರೆ ಅದು ಗಂಟೆಗೆ ಒಂದು ಸಾವಿರ ಮೈಲಿಗಳು. ಅಕಸ್ಮಾತ್ ಈ ವೇಗ ಗಂಟೆಗೆ ನೂರು ಮೈಲುಗಳಿಗೆ ಇಳಿದರೆ ಏನಾಗುತ್ತದೆ? ನಮ್ಮ ದಿನ ಮತ್ತು ರಾತ್ರಿಗಳ ಅವಧಿ ಹತ್ತು ಪಟ್ಟು ಹೆಚ್ಚಾಗುತ್ತದೆ. ಸೂರ್ಯ ಹೆಚ್ಚು ಕಾಲ ಪ್ರಜ್ವಲಿಸಿದಂತೆ ಹಸಿರೆಲ್ಲ ನಾಶವಾಗಬಹುದು. ಸೂರ್ಯನ ತಾಪಮಾನ ಹತ್ತು ಸಹಸ್ರ ಡಿಗ್ರಿ ಫ್ಯಾರನ್ಹೀಟ್ ಎಂದು ಅಂದಾಜು ಮಾಡಲಾಗಿದೆಯಲ್ಲವೆ? ನಮ್ಮ ಭೂಮಿ ಕಾಪಾಡಿಕೊಂಡಿರುವ ದೂರದಿಂದ ನಾವಿನ್ನೂ ಸುರಕ್ಷವಾಗಿದ್ದೇವೆ. ಈ ದೂರ ಹೆಚ್ಚಾದರೆ ಸಾಕಷ್ಟು ಬಿಸಿಯಿಲ್ಲದೆ ನಮ್ಮ ರಕ್ತ ಹೆಪ್ಪುಗಟ್ಟಬಹುದು. ದೂರ ಕಮ್ಮಿಯಾದರೆ ಆ ಸುಡು ತಾಪಮಾನಕ್ಕೆ ನಾವೆಲ್ಲಾ ಸುಟ್ಟು ಕರಕಲಾಗಬಹುದು. ನಮ್ಮ ಭೂಮಿ ಸೂರ್ಯನನ್ನು ಸುತ್ತುವುದು ಇಪ್ಪತ್ಮೂರು ಡಿಗ್ರಿ ಕೋನದಲ್ಲಿ. ಈ ಕಾರಣದಿಂದ ನಮ್ಮಲ್ಲಿ ಋತು ಬದಲಾವಣೆ. ಈ ವಾಲುವ ಕೋನದ ಬದಲು ಭೂಮಿ ನೆಟ್ಟಗೆ ಸೂರ್ಯನನ್ನು ಸುತ್ತಿದ್ದರೆ? ಸಾಗರದ ನೀರೆಲ್ಲಾ ಆವಿಯಾಗಿ, ಆ ಆವಿ ತಂಪಾಗಿ ಇಡೀ ಭೂಮಂಡಲದ ತುಂಬ ಮಂಜುಗಡ್ಡೆಯ ರಾಶಿಯೇ ತುಂಬಿರುತ್ತಿತ್ತು. ಇನ್ನು ಚಂದ್ರ ಮತ್ತು ಭೂಮಿಗಿರುವ ಅಂತರ ಹೆಚ್ಚಾಗಿದ್ದಿದ್ದರೆ? ಗುರುತ್ವಾಕರ್ಷಣೆಯಲ್ಲಿ ಏರುಪೇರಾಗಿ ಸಮುದ್ರಗಳೆಲ್ಲ ಉಕ್ಕಿ ಹರಿದು ನಾವೆಲ್ಲ ಕೊಚ್ಚಿ ಹೋಗುತ್ತಿದ್ದೆವೇನೊ? ಇದೇ ರೀತಿ ಭೂಮಿಯೊಳಗಿನ ಕೇಂದ್ರದ ಸ್ಥಾನ ಹೆಚ್ಚೂ-ಕಮ್ಮಿಯಾಗಿದ್ದರೆ? ಸಾಗರ ಮತ್ತಷ್ಟು ಆಳವಾಗಿದ್ದರೆ? ಆಮ್ಲಜನಕ ಮತ್ತು ಇಂಗಾಲದ ಡೈ ಆಕ್ಸೈಡ್ ಪ್ರಮಾಣದಲ್ಲಿ ಏರುಪೇರಾಗುತ್ತಿತ್ತು. ಮನುಷ್ಯನೂ ಸೇರಿದಂತೆ ನಮ್ಮೆಲ್ಲ ಜೈವಿಕ ಪರಿಸರಕ್ಕೆ ಪೂರಕವಾದ ಸಹಸ್ರಾರು ಅಂಶಗಳು ಏಕಕಾಲದಲ್ಲಿ ಒಂದೆಡೆ ಮೇಳೈಸುವ ಸಾಧ್ಯತೆ ಎಷ್ಟು? ಗ್ರಹವೊಂದರ ಮೇಲೆ ಜೀವ ವಿಕಾಸವಾಗಲು ಅಗತ್ಯವಾದ ಪೂರಕ ಅಂಶಗಳೆಲ್ಲಾ ಏಕ ಕಾಲಕ್ಕೆ ಮೇಳೈಸಲು ಅದೆಷ್ಟು ಲಕ್ಷ ಕೋಟಿಗಳಲ್ಲಿ ಒಂದು ಸಾಧ್ಯತೆಯೊ? ಎಣಿಸಲಾಗದು. ಈ ಒಂದು ಕುತೂಹಲ ನಮ್ಮೆಲ್ಲರನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳತ್ತ ಸೆಳೆಯುತ್ತಲೇ ಬಂದಿದೆ. 1930ರಿಂದ ಇಂದಿನವರೆಗೆ - ಭಾರತದಲ್ಲೇ ಹುಟ್ಟಿ, ಬೆಳೆದು, ತಮ್ಮ ಕಾರ್ಯಕ್ಷೇತ್ರವನ್ನು ವಿದೇಶಕ್ಕೆ ಬದಲಿಸದ ಏಕೈಕ ನೊಬಲ್ ಪುರಸ್ಕೃತ ವಿಜ್ಞಾನಿ - ಸಿ.ವಿ.ರಾಮನ್. ರಾಮನ್ ಮತ್ತು ಅವರು ಹುಟ್ಟು ಹಾಕಿದ ಅಪ್ಪಟ ಸ್ವಾವಲಂಬನೆಯ ವಿಜ್ಞಾನ ಚಿಂತನೆಯ ಬಗ್ಗೆ ಚರ್ಚೆ ಮಾಡಲೇಬೇಕಾದ ಸಂದರ್ಭವಿದು. ಜಗತ್ತಿನ ಭವಿಷ್ಯವನ್ನು ರೂಪಿಸುವಲ್ಲಿ ಭಾರತೀಯರು ಮಹತ್ವದ ಪಾತ್ರವಹಿಸಲಿದ್ದಾರೆಂದು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಈಗಾಗಲೇ ಮನವರಿಕೆಯಾಗಿದೆ. ದೇಶವೊಂದರ ಆರ್ಥಿಕ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ಇಂದಿನ ವಿಶ್ವ ವ್ಯಾಪಾರ ಸಂಸ್ಥೆಯಿಂದ ಪ್ರೇರಿತವಾದ ಜಾಗತೀಕರಣದ ಕಾಲದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಉತ್ತೇಜನ ನೀಡದಿರುವ ದೇಶಗಳಿಗೆ ಉಳಿಗಾಲವಿಲ್ಲ. ಜಗತ್ತಿನೆಲ್ಲೆಡೆ ನೊಬಲ್ ಪುರಸ್ಕೃತರನ್ನು ಪೋಷಿಸುವ ಸಂಸ್ಥೆ ವಿಶ್ವವಿದ್ಯಾಲಯ. ಈ ನಿಟ್ಟಿನಲ್ಲಿ ನಮ್ಮ ದೇಶದ ವಿಶ್ವವಿದ್ಯಾಲಯಗಳು ಕಳೆದ ಎಂಬತ್ಮೂರು ವರ್ಷಗಳಲ್ಲಿ ಮತ್ತೊಬ್ಬ ಸಿ.ವಿ.ರಾಮನ್ ಅನ್ನು ಕೊಟ್ಟಿಲ್ಲ. ಇದರ ಬಗ್ಗೆ ಕಾರಣ ಹುಡುಕ ಹೊರಟರೆ ನಮ್ಮೆಲ್ಲ ಪ್ರತಿಭಾವಂತ ವಿದ್ಯಾರ್ಥಿಗಳು ಮೂಲ ವಿಜ್ಞಾನ ಅಧ್ಯಯನದಿಂದ ವಿಮುಖರಾಗಿರುವ ಕಠೋರ ಸತ್ಯ ಗೋಚರಿಸುತ್ತದೆ. ಒಂದೆಡೆ ಸಂಪನ್ಮೂಲಗಳ ಕೊರತೆ, ಮತ್ತೊಂದೆಡೆ ಅನ್ವೇಷಕ ಪ್ರವೃತ್ತಿಯ ವಿದ್ಯಾರ್ಥಿಗಳ ಅಭಾವ. ಈ ನೆಪಗಳಿಗೂ ಮಿಗಿಲಾದ ಒಂದು ಪ್ರಮುಖ ಕಾರಣವೊಂದಿದೆ. ಅದುವೇ ಬದಲಾಗುತ್ತಿರುವ ಆದ್ಯತೆ. ಜಗತ್ತಿನ ಮೂರನೆಯ ಅತಿ ದೊಡ್ಡ ಸಂಖ್ಯೆಯ ವಿಜ್ಞಾನ (ತಂತ್ರಜ್ಞಾನ) ಪದವೀಧರರನ್ನು ಉತ್ಪಾದಿಸುತ್ತಿರುವ ದೇಶ ನಮ್ಮದು. ಇಂಥದೊಂದು ಕ್ಲೀಶೆಯ ವಾಕ್ಯ ಆಗಿಂದಾಗ್ಗೆ ಕಿವಿಗೆ ತಪ್ಪದೇ ಬೀಳುತ್ತಿರುತ್ತದೆ. ಈ ಮಾತುಗಳು ನಿಜವೇ ಆಗಿದ್ದರೆ ಮತ್ತೊಬ್ಬ ರಾಮನ್ ನಮ್ಮ ದೇಶದಲ್ಲೇಕೆ ಹುಟ್ಟಲಿಲ್ಲ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸದ್ಯಕ್ಕೆ ಫ್ಯಾಕ್ಟರಿಯಲ್ಲಿ ಹೊರಬರುವ ಉತ್ಪನ್ನಗಳಂತೆ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಆದರೆ ಮೂಲ ವಿಜ್ಞಾನ ವಿಷಯಗಳನ್ನು ಗಂಭೀರವಾಗಿ ಅಭ್ಯಸಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇನ್ನು ಎಂಜಿನಿಯರಿಂಗ್ ಪದವೀಧರರೂ ಹೆಚ್ಚಿನ ಪರಿಶ್ರಮವಿಲ್ಲದ (ದೇಹಕ್ಕೆ ಮತ್ತು ಮಿದುಳಿಗೆ) ಕೆಲಸಗಳತ್ತಲೇ ಗಮನ ಹರಿಸುತ್ತಿದ್ದಾರೆ. ತಮ್ಮದೇ ದೇಶ ಕಟ್ಟುವ ಸವಾಲೆಸೆಯಬಲ್ಲ ಕೆಲಸಗಳಿಂದ ವಿಮುಖರಾಗುತ್ತಾ ವಿದೇಶಗಳಲ್ಲಿ ಸಾಮಾನ್ಯರೂ ಮಾಡಬಹುದಾದಂಥ ಸಣ್ಣ-ಪುಟ್ಟ ಕೆಲಸಗಳಿಗೆ ಶರಣಾಗುತ್ತಿದ್ದಾರೆ. ರಾಮನ್ನರೇಕೆ, ವಿಶ್ವೇಶ್ವರಯ್ಯನವರನ್ನೂ ಮರೆತಿರುವ ಕಾಲವಿದು. ಕಾರು ಕಾರ್ಖಾನೆ ಕೊಡದೇ ಸತಾಯಿಸಿದ ಬ್ರಿಟಿಷರನ್ನು ಸಾಕಷ್ಟು ಒತ್ತಾಯಿಸಿ ಕಡೆಗೆ ವಿಮಾನ ಕಾರ್ಖಾನೆಯೊಂದನ್ನು ಬೆಂಗಳೂರಿಗೆ ಕೊಡುವಂತೆ ಮಾಡಿದ ಮೇರು ತಂತ್ರಜ್ಞ ವಿಶ್ವೇಶ್ವರಯ್ಯ. ಅಂದಿನ ಅವರ ಪರಿಶ್ರಮದಿಂದಾಗಿಯೇ ಬೆಂಗಳೂರಿಗೆ ದೇಶದ ವೈಮಾಂತರಿಕ್ಷ ರಾಜಧಾನಿಯೆಂಬ ಬಿರುದು. ಎಲ್ಲ ವಿದೇಶಿ ಅಸಹಕಾರಗಳನ್ನು ಎದುರಿಸಿ ದೇಶೀಯವಾಗಿ ವಿಮಾನಗಳನ್ನು ವಿನ್ಯಾಸ ಮಾಡಿ, ಅಗ್ಗದ ದರದಲ್ಲಿ ತಯಾರಿಸಿ ಗಡಿ ಕಾಯುವ ವಾಯುಪಡೆಗೆ ಸತತವಾಗಿ ವಿಮಾನಗಳನ್ನು ಪೂರೈಸುತ್ತಿರುವ ಕಾರ್ಖಾನೆ ಬೆಂಗಳೂರಿನಲ್ಲಿಯೇ ಇದೆ. ಸಶಕ್ತನಾಗಿದ್ದರೆ ಮಾತ್ರ ಮತ್ತೊಬ್ಬ ಶಕ್ತ ನಮ್ಮನ್ನು ಗೌರವಿಸಬಲ್ಲ ಎಂಬ ಮಾತುಗಳೊಂದಿಗೆ ದೇಶದ ಪರಮಾಣು ಶಕ್ತಿ ಮತ್ತು ರಕ್ಷಣಾ ಸಂಶೋಧನಾ ಇಲಾಖೆಗಳನ್ನು ಸ್ವಾವಲಂಬನೆಯ ದಾರಿಗೆ ಎಳೆದ ರಾಜಾರಾಮಣ್ಣನವರನ್ನೂ ಇಂದು ನೆನೆಯಬೇಕು. ಸೂಪರ್ ವಾಹಕಕ್ಕೆ ಸಂಬಂಧಿಸಿದ ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ ಇದೀಗ ನ್ಯಾನೊ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮಗ್ನರಾಗಿರುವ ಚಿಂತಾಮಣಿ ನಾಗೇಶ ರಾಮಚಂದ್ರ ರಾವ್, ವಾಯು ಚಲನ ವಿಜ್ಞಾನದ ಜಗದ್ಗುರು ರೊದ್ದ ನರಸಿಂಹ, ಬಾಹ್ಯಾಕಾಶ ಕ್ಷೇತ್ರದಲ್ಲಿನ ದೇಶದ ಅಪ್ರತಿಮ ಸಾಧನೆಯ ರೂವಾರಿ ಉಡುಪಿ ರಾಮಚಂದ್ರ ರಾವ್, ಜೀವ ವಿಜ್ಞಾನದ ಕ್ಲಿಷ್ಟ ಲೆಕ್ಕಾಚಾರಗಳನ್ನು ಗಣಿತದೊಂದಿಗೆ ತಾಳೆನೋಡುತ್ತಾ ಪರಿಸರ ವಿಜ್ಞಾನದಲ್ಲಿ ವಿಶ್ವಮಾನ್ಯ ಸಾಧನೆಗೈದಿರುವ ಮಾಧವ ಗಾಡ್ಗೀಳ್, ಪರಮಾಣು ವಿಜ್ಞಾನವನ್ನು ಕಲಿತೂ ಗಾಂಧಿವಾದಿಯಾಗಿ ರೂಪುಗೊಂಡು ಸಾಮಾನ್ಯರಿಗೆ ವಿಜ್ಞಾನ ಮುಟ್ಟಿಸಿದ ಹೆಚ್.ನರಸಿಂಹಯ್ಯ, ರಾಕೆಟ್ ತಂತ್ರಜ್ಞಾನ ಅಭ್ಯಸಿಸಿ ದೇಶದ ಮುಂಚೂಣಿ ಯೋಜನೆಗಳ ಸೂತ್ರಧಾರಿಯಾದ ಅಬ್ದುಲ್ ಕಲಾಮ್ .... ನಮ್ಮ ವಿಜ್ಞಾನ ವಿದ್ಯಾರ್ಥಿಗಳಿಗೆ ರೋಲ್ ಮಾಡಲ್ಗಳಾಗಬೇಕು. ಹಾಗಾದಲ್ಲಿ ಮಾತ್ರ ನಮ್ಮ ದೇಶವೂ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಹುದು. ವಿಜ್ಞಾನಗಳು ಕೇವಲ ಪ್ರಯೋಗಗಳಿಗೆ ಸೀಮಿತವಾಗದೆ, ಎಲ್ಲ ಶೋಷಿತ ಮನುಜರ ಬಿಡುಗಡೆಯ ಹಾದಿಯಾಗಿ, ಸಾಮಾಜಿಕ ದುರಂತಗಳ ಬಗ್ಗೆ ಎಚ್ಚರಿಸುವ ದನಿಯಾಗಬೇಕು. ಇಂದು ಮಾತ್ರವಲ್ಲ, ಅನುದಿನವೂ ವಿಜ್ಞಾನ ದಿನವಾಗಲಿ ಎಂಬುದು ವಿಜ್ಞಾನಾಸಕ್ತರೆಲ್ಲರ ಹಾರೈಕೆ. ರಾಮನ್ ಪರಿಣಾಮ ಸಾಗರದ ಮೇಲೊಂದು ಹಡಗಿನ ಪಯಣ ಬಹುದೊಡ್ಡ ಆವಿಷ್ಕಾರಕ್ಕೆ ಕಾರಣವಾಗಬಹುದೆಂಬ ಕಲ್ಪನೆ ಬಹುಶಃ ಸಿ.ವಿ.ರಾಮನ್ ಅವರಿಗೂ ಇರಲಿಲ್ಲ. 1921ರ ಬೇಸಗೆಯಲ್ಲಿ ಅವರು ಭಾರತದಿಂದ ಲಂಡನ್ನಿನತ್ತ ಕೈಗೊಂಡ ಮೊದಲ ಪಯಣದಲ್ಲಿ ಮೆಡಿಟರೇನಿಯನ್ ಸಮುದ್ರದ ನೀರಿನ ಪಾರದರ್ಶಕವಲ್ಲದ ನೀಲ ವರ್ಣವು ಬೆರಗು ಹುಟ್ಟಿಸಿತು. ಮೊದಲಿಗೆ ಸಮುದ್ರದೊಳಗೆ ಬೆಳಕಿನ ಕಿರಣಗಳು ಪ್ರವೇಶಿಸುವಾಗ ನೀರಿನ ಅಣುಗಳಲ್ಲಿ ನಡೆಯುವ ವಕ್ರೀಭವನದಿಂದಾಗಿ (ಬಾಗುವಿಕೆ) ನೀಲ ವರ್ಣ ಗೋಚರವಾಗುತ್ತಿರಬಹುದೆಂದು ಭಾಸವಾಗಿತ್ತು. ಅದೇ ವರ್ಷದ ಸೆಪ್ಟೆಂಬರಿನಲ್ಲಿ ಕೊಲ್ಕೊತ್ತಾಗೆ ಹಿಂದಿರುಗಿದ ರಾಮನ್ ಅವರು ಈ ಬಗ್ಗೆ ಗಹನವಾದ ಸಂಶೋಧನೆಗಳನ್ನು ಕೈಗೊಂಡರು. ಅನಿಲಗಳು, ಭಾಷ್ಪಗಳು, ಹರಳುಗಳು ಮತ್ತಿತರ ಬೆಳಕು ಹಾಯಬಲ್ಲ ಎಲ್ಲ ಮಾಧ್ಯಮಗಳ ಮೇಲೆ ತಮ್ಮ ಪ್ರಯೋಗಗಳನ್ನು ಅವರು ಮುಂದುವರಿಸಿದರು. ಸಮುದ್ರ ನೀರಿನಲ್ಲಿ ಸ್ಥಳೀಯವಾಗಿ ಬದಲಾಗುವ ಸಾಂದ್ರತೆಗೆ ಕಾರಣಗಳನ್ನು ಕಂಡುಕೊಳ್ಳಲು ಯತ್ನಿಸಿದರು. 1922-1927ರ ತನಕ ತಮ್ಮ ಸಹೋದ್ಯೋಗಿಗಳಾಗಿದ್ದ ಕೆ.ಎಸ್.ಕೃಷ್ಣನ್ ಮತ್ತು ಕೆ.ಆರ್.ರಾಮನಾಥನ್ ಅವರ ಜತೆಗೂಡಿ ತಾವು ಕಂಡುಕೊಂಡ ಹೊಸ ಹೊಳಹಿಗೆ ಭಾಷ್ಯವನ್ನು ಬರೆದರು. ಜಗತ್ತಿನ ಭೌತವಿಜ್ಞಾನಿಗಳ ಗಮನವನ್ನು ದಟ್ಟ ಸಾಂದ್ರತೆಯ ಮಾಧ್ಯಮದ ಅಣುಗಳಲ್ಲಿ ಬೆಳಕಿನ ಚದುರುವಿಕೆ ಎಂಬ ಹೊಸ ವಿಷಯದ ಬಗ್ಗೆ ಹರಿಸಿದರು. 1929ರಲ್ಲಿ ಜರುಗಿದ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಅಧ್ಯಕ್ಷೀಯ ಭಾಷಣದಲ್ಲಿ ಸ್ವತಃ ಸಿ.ವಿ.ರಾಮನ್ ಅವರು ತಾವು ಕಂಡುಕೊಂಡ ಕೌತುಕಗಳ ಕುರಿತು ಹೀಗೆ ಹೇಳಿದ್ದಾರೆ: ''ನೇರಳೆ ವರ್ಣದ ಗಾಜಿನ ಮೂಲಕ ಸೋಸಿ ಬಂದ ಸೂರ್ಯನ ಕಿರಣಗಳನ್ನು ಕೆಲವೊಂದು ದ್ರವಗಳು ಮತ್ತು ಘನವಸ್ತುಗಳಲ್ಲಿ (ಉದಾಹರಣೆಗೆ ನೀರು ಅಥವಾ ಮಂಜುಗಡ್ಡೆ) ಹಾಯಿಸಿದಾಗ, ಆ ವಸ್ತುವಿನಿಂದ ಹೊರಬಂದ ಬೆಳಕಿನಲ್ಲಿ ಹೊಸ ಕಿರಣಗಳು ಗೋಚರವಾದವು. ನಂತರ ಹಸಿರು ವರ್ಣದ ಗಾಜನ್ನು ನೇರಳೆ ವರ್ಣದ ಗಾಜು ಮತ್ತು ಬೆಳಕು ಸ್ವೀಕರಿಸುವ ವಸ್ತುವಿನ ನಡುವೆ ಇಟ್ಟು ನೋಡಿದಾಗ ಯಾವುದೇ ಕಿರಣಗಳೂ ಗೋಚರವಾಗಲಿಲ್ಲ. ಮತ್ತೆ ಹಸಿರು ವರ್ಣದ ಗಾಜನ್ನು ಕಣ್ಮುಂದೆ ಇಟ್ಟುಕೊಂಡು ಇದೇ ನೇರಳೆ ವರ್ಣದ ಗಾಜಿನಿಂದ ಸೋಸಿ ಬಂದ ಕಿರಣಗಳನ್ನು ವಸ್ತುವಿನತ್ತ ಹಾಯಿಸಿದಾಗ, ಕಿರಣಗಳು ಗೋಚರವಾದವು. ನೇರಳೆ ವರ್ಣದ ಬೆಳಕಿನ ಕಿರಣಗಳು ಹಸಿರು ವರ್ಣದ ಬೆಳಕಿನ ಕಿರಣಗಳಾಗಿ ಬದಲಾವಣೆಗೊಂಡಿದ್ದವು.'' ತೀರಾ ಸರಳವಾಗಿ ರಾಮನ್ ಪರಿಣಾಮದ ತತ್ತ್ವವನ್ನು ವಿವರಿಸಬೇಕೆಂದರೆ, ಅಣುಗಳ ಮೇಲೆ ಬೆಳಕಿನ ಕಿರಣಗಳನ್ನು ಹಾಯಿಸಿದಾಗ ಕಿರಣಗಳು ಚದುರುವ ಕಾರಣ ಆ ಬೆಳಕಿನ ತರಂಗಾಂತರದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಬೆಳಕಿನ ಸಲಾಕೆಯೊಂದನ್ನು ಧೂಳುರಹಿತ ವಾತಾವರಣದಲ್ಲಿಟ್ಟ ಪಾರದರ್ಶಕ ರಾಸಾಯನಿಕ ಮಿಶ್ರಣದ ಮೂಲಕ ಹಾಯಿಸಿದಾಗ, ಬೆಳಕಿನ ಕಿರಣಗಳ ಅಲ್ಪಭಾಗವು ಸಲಾಕೆಯು ಹಾಯುವ ಕೋನಕ್ಕಿಂತಲೂ ಕೊಂಚ ಓರೆಯಾಗಿ ಹೊರಬರುತ್ತದೆ. ಹೀಗೆ ಓರೆಯಾಗಿ ಹೊರಬರುವ ಬೆಳಕಿನ ಕಿರಣಗಳ ತರಂಗಾಂತರಗಳು ಮೂಲ ಸಲಾಕೆಯ ತರಂಗಾಂತರಗಳಿಗಿಂತಲೂ ಭಿನ್ನವಾಗಿರುತ್ತವೆ. ಈ ಭಿನ್ನ ತರಂಗಾಂತರಗಳಿಂದ ಹೊರಬರುವ ಬೆಳಕಿನ ಸ್ವಭಾವವನ್ನು ರಾಮನ್ ಪರಿಣಾಮ ಎಂದು ಗುರುತಿಸಲಾಗಿದೆ. ಈ ತತ್ತ್ವವನ್ನು ಸುಲಭವಾಗಿ ಅರ್ಥೈಸಿಕೊಳ್ಳಬೇಕೆಂದರೆ ಬೆಳಕು ಕೇವಲ ಫೋಟಾನ್ ಕಣಗಳ ರೂಪದಲ್ಲಿ ಮಾತ್ರ ಪ್ರವಹಿಸುತ್ತದೆಂದು ಪರಿಭಾವಿಸಬೇಕು. ಆದರೆ, ಬೆಳಕು ಅಲೆಗಳ ರೂಪದಲ್ಲೂ ಪ್ರವಹಿಸುತ್ತದೆಂಬ ವಿಷಯ ಇಲ್ಲಿ ಪರಿಗಣನೆಗೆ ಬರುವುದಿಲ್ಲ. 1930ರ ದಶಕದ ಕೊನೆಯ ಹೊತ್ತಿಗೆ ಯಾವುದೇ ರಾಸಾಯನಿಕ ಅಣುಗಳ ಪರೀಕ್ಷೆಯಲ್ಲಿ, ಮಾದರಿಯನ್ನು ಹಾಳುಗೆಡವದೇ ವಿಶ್ಲೇಷಿಸಲು, ರಾಮನ್ ಪರಿಣಾಮ ಆಧರಿತ ಉಪಕರಣಗಳನ್ನು ಬಳಸುವ ಪರಿಪಾಠ ಆರಂಭವಾಯಿತು. ಈ ಸಂದರ್ಭದಲ್ಲಿ ನಿರ್ಮಾಣವಾದುದೇ ರಾಮನ್ ಸ್ಪೆಕ್ಟ್ರೋಮೀಟರ್ ಎಂಬ ರೋಹಿತಮಾಪಕ. ಬಿಳಿಯ ಬೆಳಕಿನಿಂದ ವಿಭಜನೆಯಾದ ವಿವಿಧ ವರ್ಣಗಳ ಬೆಳಕಿನ ಕಿರಣಗಳ ಗುಣಲಕ್ಷಣಗಳನ್ನು ಈ ಯಂತ್ರವು ಗುರುತಿಸಬಲ್ಲದು. ದ್ವಿತೀಯ ಮಹಾಯುದ್ಧದ ವೇಳೆಗೆ ರಾಮನ್ ಸ್ಪೆಕ್ಟ್ರೋಮೀಟರ್ನ ಜಾಗದಲ್ಲಿ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್ ಅಂದರೆ ಬೆಳಕಿನ ಆವಗೆಂಪು ಕಿರಣಗಳನ್ನು ಬಳಸಿ ನಡೆಸುವ ಯಂತ್ರಕ್ಕೆ ಪ್ರಾಧಾನ್ಯ ಸಿಕ್ಕಿತು. 1960ರ ದಶಕದಲ್ಲಿ ಬೆಳಕಿನ ಸಾಂದ್ರ ಸಲಾಕೆ, ಲೇಸರ್ ಆವಿಷ್ಕಾರವಾಗುವ ತನಕ ರಾಮನ್ ಸ್ಪೆಕ್ಟ್ರಾಮೀಟರ್ ಬಳಕೆಯಲ್ಲಿರಲಿಲ್ಲ. ತದನಂತರ ಲೇಸರ್ ಬೆಳಕಿನ ಸಲಾಕೆಗಳನ್ನು ಬಳಸಲು ಅನುವಾಗುವಂಥ ಮಾರ್ಪಾಡುಗಳನ್ನು ರಾಮನ್ ಸ್ಪೆಕ್ಟ್ರೋಮೀಟರ್ಗೆ ಮಾಡಲಾಯಿತು. ಈ ಹೊಸ ಯಂತ್ರದ ಮೂಲಕ ಇಂದು ಪೆಟ್ರೋರಾಸಾಯನಿಕಗಳು ಮತ್ತು ಔಷಧರಾಸಾಯನಿಕಗಳ ತಯಾರಿಕೆಯಲ್ಲಿ ರಾಸಾಯನಿಕ ಪ್ರಮಾಣದ ಬಗ್ಗೆ ನಿಗಾ ವಹಿಸಬಹುದಾಗಿದೆ. ಅಪರಾಧಗಳು ನಡೆದ ಸಂದರ್ಭದಲ್ಲಿ ಪೊಟ್ಟಣಗಳಲ್ಲಿಟ್ಟ ರಾಸಾಯನಿಕ ಕುರುಹುಗಳನ್ನು ಹೊರತೆಗೆಯದೆಯೇ ವಿಶ್ಲೇಷಿಸಲು ಇದೇ ಯಂತ್ರವನ್ನು ಬಳಸಲಾಗುತ್ತಿದೆ. ಹಾಗೆಯೇ ಸೂಕ್ಷ್ಮ ಬಿಡಿಭಾಗಕ್ಕೆ ಹಚ್ಚಿದ ವರ್ಣದ್ರವ್ಯ ಎಷ್ಟರಮಟ್ಟಿಗೆ ಒಣಗಿದೆಯೆಂಬುದನ್ನು ಅರಿಯಬಹುದು. ಸುರಕ್ಷ ಅಂತರದಿಂದ ಪರಮಾಣು ವಿದ್ಯುತ್ ಸ್ಥಾವರಗಳ ತ್ಯಾಜ್ಯದ ರಾಸಾಯನಿಕ ಅಂಶಗಳನ್ನು ಅಳೆಯಬಹುದು. ಕ್ಯಾನ್ಸರ್ ರೋಗದ ಆರಂಭದ ಹಂತಗಳನ್ನು ಕೋಶ ಬದಲಾವಣೆಗಳನ್ನು ದಾಖಲಿಸಬಲ್ಲ ಈ ಯಂತ್ರದ ಮೂಲಕ ಅರಿಯಬಹುದು. ಚರ್ಚೆಯ ವಿಷಯಗಳು ಫೆಬ್ರವರಿ 28 ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ.ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ ದಿನವಿದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ.1928ರ ಫೆಬ್ರವರಿ 28ರಂದು ಸಿ.ವಿ.ರಾಮನ್ ಅವರು ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು ಪ್ರತಿಪಾದಿಸಿದರು. ಎರಡು ವರ್ಷಗಳ ನಂತರ ಈ ಆವಿಷ್ಕಾರಕ್ಕಾಗಿ ರಾಮನ್ ಅವರಿಗೆ ನೊಬೆಲ್ ಪುರಸ್ಕಾರ ದೊರಕಿತು. ಮುಂದಿನ ದಿನಗಳಲ್ಲಿ ಅದು ರಾಮನ್ ಪರಿಣಾಮವೆಂದೇ ಪ್ರಸಿದ್ಧವಾಯಿತು. ಇದು ಇತಿಹಾಸ. 1987ರಿಂದಲೂ ದೇಶಾದ್ಯಂತ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. 1999ರಿಂದ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಷ್ಟ್ರೀಯ ವಿಜ್ಞಾನ ದಿನದಂದು ಚರ್ಚಿಸಲಾಗುವ ವಿಷಯವನ್ನು ಮೊದಲೇ ಘೋಷಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಆದ್ಯತೆಯ ಘೋಷ ವಾಕ್ಯವಾದ ಮೇಕ್ ಇನ್ ಇಂಡಿಯಾ ಕುರಿತಂತೆ ಈ ವರ್ಷ ಚರ್ಚೆಗಳು ನಡೆಯಲಿವೆ. 1999: ಬದಲಾಗುತ್ತಿರುವ ನಮ್ಮ ಪೃಥ್ವಿ 2000: ಮೂಲ ವಿಜ್ಞಾನದತ್ತ ಆಸಕ್ತಿಯನ್ನು ಕೆರಳಿಸುವ ಮರುಯತ್ನ 2001: ವಿಜ್ಞಾನ ಶಿಕ್ಷಣಕ್ಕಾಗಿ ಮಾಹಿತಿ ತಂತ್ರಜ್ಞಾನ 2002: ಕಸದಿಂದ ರಸ 2003: ಜೀವರಾಶಿಯ ನೀಲನಕ್ಷೆ ಡಿ.ಎನ್.ಎ.ನ 50 ವರ್ಷಗಳು ಮತ್ತು ಐ.ವಿ.ಎಫ್.ನ 25 ವರ್ಷಗಳು 2004: ಸಮುದಾಯದಲ್ಲಿ ವಿಜ್ಞಾನ ಪ್ರಜ್ಞೆಗೆ ಪ್ರೋತ್ಸಾಹ 2005: ಭೌತವಿಜ್ಞಾನದ ಸಂಭ್ರಮಾಚರಣೆ 2006: ನಮ್ಮ ಭವಿಷ್ಯತ್ತಿಗಾಗಿ ಪ್ರಕೃತಿಯ ಪರಿಪಾಲನೆ 2007: ಪ್ರತಿ ನೀರಹನಿಗೂ ಹೆಚ್ಚು ಬೆಳೆ 2008: ಭೂಗ್ರಹ ಅರ್ಥೈಸಿಕೊಳ್ಳುವಿಕೆ 2009: ವಿಜ್ಞಾನ ಕ್ಷಿತಿಜದ ವಿಸ್ತರಣೆ 2010: ಸುಸ್ಥಿರ ಅಭಿವೃದ್ಧಿಗಾಗಿ ಲಿಂಗ ಸಮಾನತೆ, ವಿಜ್ಞಾನ ಮತ್ತು ತಂತ್ರಜ್ಞಾನ 2011: ನಿತ್ಯ ಜೀವನದಲ್ಲಿ ರಸಾಯನವಿಜ್ಞಾನ 2012: ಪರಿಶುದ್ಧ ಇಂಧನದ ಆಯ್ಕೆಗಳು ಮತ್ತು ಪರಮಾಣು ಸ್ಥಾವರಗಳ ಸುರಕ್ಷೆ 2013: ತಳಿ ಮಾರ್ಪಾಡಾದ ಬೆಳೆಗಳು ಮತ್ತು ಆಹಾರ ಭದ್ರತೆ 2014: ವೈಜ್ಞಾನಿಕ ಮನೋಭಾವದ ಪೋಷಣೆ 2015: ರಾಷ್ಟ್ರ ನಿರ್ಮಾಣಕ್ಕಾಗಿ ವಿಜ್ಞಾನ 2016: ಭಾರತದಲ್ಲೇ ಉತ್ಪಾದನೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೇರಿತ ಹೊಸಶೋಧಗಳು Hareeshkumar K AM(PCM) GHS HUSKURU MALAVALLI TQ MANDYA DT 571475 mobile no 9880328224 email [email protected] -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
