http://m.vijaykarnataka.com/district/bengalurucity/IIC-campus/articleshow/51273622.cms
*ಐಐಎಸ್ಸಿ ಕ್ಯಾಂಪಸ್ನಲ್ಲಿ ಬೆಳಗಿತು ವಿಜ್ಞಾನ ದೀವಿಗೆ* ವಿಕ ಸುದ್ದಿಲೋಕ | Mar 6, 2016, 04.00 AM IST Whatsapp <javascript:void(0);>Facebook <javascript:void(0);>Google Plus <javascript:void(0);>Twitter <javascript:void(0);>Email <javascript:void(0);> IIC-campus AAA ಓಪನ್ ಡೇಗೆ ಹರಿದುಬಂತು ಜನಪ್ರವಾಹ, ತಣಿಯಿತು ಕುತೂಹಲಿಗಳ ಆಸಕ್ತಿ- ಬೆಂಗಳೂರು: ಎದುರಿಗಿರುವ ಮೇಜನ್ನೊಮ್ಮೆ ಗುದ್ದುತ್ತೀರಿ. ಆಗ ಬಿಡುಗಡೆಯಾಗುವ ಶಕ್ತಿ ಎಷ್ಟು? ಮನೆಯಲ್ಲಿ ಫ್ರಿಜ್ ಇದೆ, ಆದರೆ ಅದರಲ್ಲಿ ವಿಪರೀತ ಐಸ್ ಕಟ್ಟುತ್ತಿದೆ. ಯಾಕೆ ಗೊತ್ತಾ? ಯಾವತ್ತೋ ಬರಬಹುದಾದ ಅಲ್ಝೈಮರ್ಸ್ ಕಾಯಿಲೆ ಬಗ್ಗೆ ಇವತ್ತೇ ಗೊತ್ತಾದರೆ ಎಷ್ಟು ಚೆನ್ನ? ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುವ ಕ್ಯಾನ್ಸರ್ನ ಮೂಲಚೂಲ ತಿಳಿದಿದ್ದರೆ ಎಷ್ಟು ಒಳ್ಳೆಯದಲ್ಲವೆ? ಇತ್ತೀಚೆಗೆ ಭಾರಿ ಸುದ್ದಿಯಾಗಿರುವ ಗುರುತ್ವ ಅಲೆಗಳ ಬಗ್ಗೆ ಸರಳ ಪ್ರಯೋಗದಿಂದ ವಿಸ್ತರಿಸುವ ಅರಿವು ಎಷ್ಟೊಂದು ರೋಮಾಂಚಕ? ಶತ್ರುಪಡೆಗಳ ವಿಮಾನಗಳನ್ನು ಹೊಡೆದುರುಳಿಸಬಲ್ಲ ಅಸ್ತ್ರ ನಮ್ಮ ಬತ್ತಳಿಕೆಗೆ ಬಂದಿದ್ದು ಹೇಗೆ? ಕಲಾಂ ಅವರ ಜೀವನ ಪಯಣ ತಿಳಿದುಕೊಳ್ಳುವುದು ಎಂಥಾ ಚೇತೋಹಾರಿ ಸಂಗತಿ... ಆಹಾ! ಎಲ್ಲರೂ ಸುಮ್ಮನಿದ್ದಾಗ ಮನಸ್ಸಿನ ದಿಗಂತದಲ್ಲಿ ಹೀಗೆ ಕುತೂಹಲ ಕೆರಳಿಸುವ ಸಂಗತಿಗಳು ಅನಂತ. ಏಕೆಂದರೆ, ನಮ್ಮ ದಿನನಿತ್ಯದ ಜೀವನವನ್ನು ಆಳುತ್ತಿರುವುದು ವಿಜ್ಞಾನ ಮತ್ತು ತಂತ್ರಜ್ಞಾನ. ಇದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಹೆಚ್ಚಿನವರು ವಿಜ್ಞಾನ-ತಂತ್ರಜ್ಞಾನಗಳ ಫಲಾನುಭವಿಗಳಾಗಿ ಇರುತ್ತಾರೆಯೇ ವಿನಾ ಆ ಅನ್ವೇಷಣೆಗಳ ಹಿಂದಿನ ಕತೆಯನ್ನಾಗಲಿ, ವೈಜ್ಞಾನಿಕ ಪಯಣವನ್ನಾಗಲಿ ತಿಳಿದುಕೊಂಡಿರುವುದಿಲ್ಲ. ಆದರೆ, ನಗರದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ ಶನಿವಾರವಿಡೀ ಸಾರ್ವಜನಿಕರ ಇಂಥ ಪ್ರಶ್ನೆಗಳಿಗೆ ಉತ್ತರ ಕೊಟ್ಟಿತು. ಇದಕ್ಕೆ ವೇದಿಕೆ ಒದಗಿಸಿದ್ದು ಅದು ಆಚರಿಸಿದ 2016ನೇ ಸಾಲಿನ 'ಓಪನ್ ಡೇ' ಕಾರ್ಯಕ್ರಮ. ಸಾಮಾನ್ಯವಾಗಿ ಭಾರತೀಯ ವಿಜ್ಞಾನ ಸಂಸ್ಥೆಯೊಳಕ್ಕೆ ಸಾರ್ವಜನಿಕರನ್ನು ಬಿಡುವುದಿಲ್ಲ. ಆದರೆ ವರ್ಷಕ್ಕೆ ಹೀಗೆ ಒಂದು ದಿನ ಮಾತ್ರ ಎಲ್ಲರನ್ನೂ ಮುಕ್ತವಾಗಿ ಬಿಡಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ವಿಜ್ಞಾನ ಸಂಸ್ಥೆ 'ಓಪನ್ ಡೇ'ಯಂದು ಶಾಲಾ ಮಕ್ಕಳಿಂದ ಹಿಡಿದು ಉದ್ಯಮಶೀಲ ಪ್ರವೃತ್ತಿಯುಳ್ಳವರು, ಈ ದೇಶಕ್ಕೆ ಏನಾದರೂ ಮೌಲಿಕವಾದುದನ್ನು ಕಾಣಿಕೆಯಾಗಿ ಕೊಡಬೇಕೆಂದು ಹೊಂಗನಸು ಕಟ್ಟಿಕೊಂಡಿರುವವರು ತನ್ನಲ್ಲಿಗೆ ಬರಲೆಂದು ಆಶಿಸುತ್ತದೆ. ಇದಕ್ಕೆ ತಕ್ಕಂತೆ ಶನಿವಾರ ವಿಜ್ಞಾನ ಸಂಸ್ಥೆಯ ವಿಶಾಲ ಆವರಣದಲ್ಲಿ ಯುವಜನರ ಪ್ರವಾಹವೇ ಇತ್ತು. ಇವರ ಜತೆಗೆ ಪೋಷಕ ವರ್ಗದವರು, ಶಿಕ್ಷಕರು, ಉಪನ್ಯಾಸಕರು, ಆಸಕ್ತ ಸಾರ್ವಜನಿಕರು ಎಲ್ಲರೂ ಬಂದು, ತನ್ಮಯತೆಯಿಂದ ತಮ್ಮ ವಿಜ್ಞಾನ ಸಂಬಂಧಿ ಕುತೂಹಲಗಳನ್ನು ತಣಿಸಿಕೊಂಡರು. ವಿಜ್ಞಾನ ಸಂಸ್ಥೆಯಲ್ಲಿ ಇದಕ್ಕೆ ತಕ್ಕಂತೆ ವ್ಯವಸ್ಥೆ ಇತ್ತು. ಎಲ್ಲ ವಿಭಾಗಗಳ ಮುಂದೆಯೂ ಎಲ್ಸಿಡಿ ಪರದೆಗಳು, ಲ್ಯಾಪ್ಟಾಪ್ ಸಮೇತ ಸನ್ನದ್ಧರಾಗಿ ನಿಂತಿದ್ದ ಸಂಶೋಧಕರು ಇವುಗಳನ್ನೆಲ್ಲ ವಿವರಿಸುತ್ತಿದ್ದ ನೂರಾರು ಸ್ವಯಂಸೇವಕರು ಎಲ್ಲರೂ ಇದ್ದರು. ಅಲ್ಲದೆ, ದೇಶದ ದಿಕ್ಕುದೆಸೆಯನ್ನೇ ಬದಲಿಸಬಲ್ಲ ಮಹತ್ವದ ಸಂಶೋಧನೆಗಳ ಪ್ರಾತ್ಯಕ್ಷಿಕೆಗಳು ಕೂಡ ಅಲ್ಲಿದ್ದವು. ಇದರ ಜತೆಗೆ ಅಲ್ಲಿನ ಕೆಲವು ಹವಾನಿಯಂತ್ರಿತ ಸಭಾಂಗಣಗಳಲ್ಲಿ ಕೆಲವು ವಿಡಿಯೋ ಪ್ರದರ್ಶನ, ಕ್ವಿಜ್, ಪ್ರಶ್ನೋತ್ತರ, ಪ್ರಯೋಗ ಪ್ರಾತ್ಯಕ್ಷಿಕೆಗಳು, ಅರ್ಧರ್ಧ ಗಂಟೆಗಳ ಉಪನ್ಯಾಸಗಳು ಎಲ್ಲವೂ ಯಾವ ಅಡಚಣೆಯೂ ಇಲ್ಲದೆ ನಡೆಯುತ್ತಿದ್ದವು. ಸಂಜೆ ಐದು ಗಂಟೆ ದಾಟಿದರೂ ಜನರು ವಿಜ್ಞಾನ ಸಂಸ್ಥೆಯೊಳಗೆ ಲಗ್ಗೆ ಇಡುತ್ತಲೇ ಇದ್ದರು. 'ಜ್ಞಾನಂ ವಿಜ್ಞಾನ ಸಹಿತಮ್' ಎನ್ನುವ ಮಾತು ಹಳೆಯದೇ ಇರಬಹುದು. ಆದರೆ, ಐಐಎಸ್ಸಿ ಆವರಣದಲ್ಲಿ ಅದು ಇನ್ನೊಂದು ಲೋಕವನ್ನೇ ಸೃಷ್ಟಿಸಿದ್ದು ಸುಳ್ಳಲ್ಲ. ಅಲ್ಲಿ, '....ವಿಜ್ಞಾನ ದೀವಿಗೆಯ ಬೆಳಗ ಬನ್ನಿ' ಎನ್ನುವ ಕವಿವಾಣಿ ಕೂಡ ಮೂರ್ತರೂಪವನ್ನು ತಾಳಿತ್ತು. ಓಪನ್ ಡೇ ಹಿನ್ನೆಲೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ದಾನವಾಗಿ ನೀಡಿದ 371 ಎಕರೆ ಭೂಮಿ ಮತ್ತು ಉದ್ಯಮಿ ಜಮ್ಷೆಡ್ಜೀ ಟಾಟಾ ಅವರ ಹೆಬ್ಬಯಕೆಯ ಫಲವಾಗಿ 1909ರಲ್ಲಿ ಮೈವೆತ್ತ ಸಂಸ್ಥೆಯೇ ಭಾರತೀಯ ವಿಜ್ಞಾನ ಸಂಸ್ಥೆ. ಅಂದ ಹಾಗೆ 1928ರ ಫೆ.28ರಂದು ತಮ್ಮ ಸಂಶೋಧನೆಗಾಗಿ ನೊಬೆಲ್ ಬಹುಮಾನ ಪಡೆದ ಸಿ.ವಿ. ರಾಮನ್ ಈ ಸಂಸ್ಥೆಯ ನಿರ್ದೇಶಕರಾಗಿದ್ದರು. ಇದರ ಬೆನ್ನಲ್ಲೇ ಬರುವ ಮಾರ್ಚ್ 3 ಜಮ್ಷೆಡ್ಜೀ ಅವರ ಜನ್ಮದಿನ. ಈ ದಿನವನ್ನು ಸಂಸ್ಥೆಯು 'ಸಂಸ್ಥಾಪಕರ ದಿನ'ವಾಗಿ ಆಚರಿಸುತ್ತದೆ. ಇದಾದ ನಂತರ ಬರುವ ಶನಿವಾರದಂದು ಈ ಕ್ಯಾಂಪಸ್ನಲ್ಲಿ 'ಓಪನ್ ಡೇ' ಆಚರಿಸಲಾಗುತ್ತದೆ. ಮೊದಲೆಲ್ಲ ಇದನ್ನು ಎರಡು ವರ್ಷಗಳಿಗೊಮ್ಮೆ ಆಚರಿಸಲಾಗುತ್ತಿತ್ತು. ಆದರೆ 5 ವರ್ಷಗಳಿಂದ ಇದನ್ನು ಪ್ರತೀ ವರ್ಷವೂ ಆಚರಿಸಲಾಗುತ್ತಿದೆ. ಐಐಎಸ್ಸಿಯಲ್ಲಿ 40 ವಿಭಾಗಗಳಿದ್ದು, 500 ಪ್ರೊಫೆಸರ್ಗಳಿದ್ದಾರೆ. ಇದರ ಜತೆಗೆ 2,000ಕ್ಕೂ ಹೆಚ್ಚು ಸಂಶೋಧನಾರ್ಥಿಗಳು, 500ಕ್ಕೂ ಸಂಶೋಧನೋತ್ತರ ವಿಜ್ಞಾನದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಇವರೆಲ್ಲರೂ ಮಾಡುವ ಸಂಶೋಧನೆಗಳನ್ನು ನಮ್ಮ ಜನರೂ ನೋಡಿ, ತಿಳಿದುಕೊಳ್ಳಬೇಕು ಎನ್ನುವ ಹಂಬಲವೇ 'ಓಪನ್ ಡೇ' ಹಿಂದಿರುವ ಆಶಯ. ನ್ಯಾನೊ ಟೆಕ್ನಾಲಜಿ ಕಡೆ ಒಲವಿನ ಉಬ್ಬರ ನ್ಯಾನೊ ತಂತ್ರಜ್ಞಾನವಂತೂ ಈಗ ವಿಜ್ಞಾನ ರಂಗದಲ್ಲಿ ಮುಂಚೂಣಿಯಲ್ಲಿದ್ದು, ಅರ್ಧಕ್ಕೂ ಹೆಚ್ಚು ಭಾಗ ವಿಜ್ಞಾನವನ್ನು ಅದೇ ಆಳುತ್ತಿದೆ! ಮುಂಬರುವ ದಿನಗಳಲ್ಲಿ ಅದರ ಪ್ರಭಾವ ಆರೋಗ್ಯ, ಕೃಷಿ, ಪರಿಸರ ವಿಜ್ಞಾನ, ವೈದ್ಯಕೀಯ, ಎಲೆಕ್ಟ್ರಾನಿಕ್ಸ್, ಸೆನ್ಸಿಂಗ್, ಬಿಲ್ಡಿಂಗ್ ಮೆಟಿರೀಯಲ್ಸ್.. ಹೀಗೆ ಬದುಕಿನ ಸಕಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳುವುದು ನಿಸ್ಸಂಶಯ. ಹೀಗಾಗಿಯೇ ಐಐಎಸ್ಸಿಯಲ್ಲಿರುವ 'ನ್ಯಾನೊ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ' ಈಗ ಒಂದು 'ಐಕಾನಿಕ್ ಸೆಂಟರ್' ಆಗಿದೆ. ಐಐಎಸ್ಸಿಯಲ್ಲಿರುವ ಈ ಕೇಂದ್ರದ ಜತೆ ಜಗತ್ತಿನ 160 ಉನ್ನತ ವಿಜ್ಞಾನ-ತಂತ್ರಜ್ಞಾನ ಸಂಸ್ಥೆಗಳು, ಆಸ್ಟ್ರೇಲಿಯಾದಂಥ ದೇಶಗಳು ಕೂಡ ಒಡಂಬಡಿಕೆ ಮಾಡಿಕೊಂಡಿದೆ. ಅಕ್ಷರಶಃ ಇದೊಂದು ಬೇರೆಯದೇ ಲೋಕ! ಇಲ್ಲಿ ಸಂಶೋಧನೆಯಲ್ಲಿ ಮುಳುಗಿರುವ ಪ್ರತಿಭಾವಂತರೆಂದರೆ ಡಾ.ನವಕಾಂತ್ ಭಟ್, ಡಾ. ಶ್ರೀನಿವಾಸ ರಾಘವನ್, ಡಾ.ರುದ್ರಪ್ರತಾಪ್, ಡಾ.ಸಂಜಯ್ ಶ್ರೀವಾಸ್ತವ, ಡಾ.ಆರ್.ಎನ್. ನರಹರಿ, ಡಾ.ಶ್ರೀನಿವಾಸ್, ಡಾ.ಸವಿತಾ, ಡಾ.ಪಿಯೂಷ್ ಜೈಸ್ವಾಲ್, ಪ್ರಭಾಕರ ರಾವ್ ಮತ್ತಿತರರು. ಮುಖ್ಯವಾಗಿ ಇಲ್ಲಿ ನಡೆಯುತ್ತಿರುವುದೆಲ್ಲ 'ಕಟಿಂಗ್ ಎಡ್ಜ್ ರೀಸರ್ಚ್'ಗಳು. ಅಂದರೆ, ಇವು ನಾಳೆ ಜಗತ್ತಿನ ದಿಕ್ಕುದೆಸೆಯನ್ನೇ ಬದಲಿಸಬಲ್ಲವು. ಇದರ ಪಕ್ಕದಲ್ಲೇ ಇರುವ ಏರೋಸ್ಪೇಸ್ ಎಂಜಿನಿಯರಿಂಗ್, ಭೌತವಿಜ್ಞಾನ, ಜೀವವಿಜ್ಞಾನ, ನರವಿಜ್ಞಾನ ವಿಭಾಗಗಳಲ್ಲಿ ಕೂಡ ಆಸಕ್ತರ ದಂಡೇ ನೆರೆದಿತ್ತು. ಕಲಾಂಗೆ ಸಲಾಂ! 'ಭಾರತದ ಕ್ಷಿಪಣಿ ಪಿತಾಮಹ' ಅಬ್ದುಲ್ ಕಲಾಂಗೂ ಐಐಎಸ್ಸಿಗೂ ಇದ್ದ ನಂಟು ಗಾಢವಾದುದು. ಹೀಗಾಗಿ ಐಐಎಸ್ಸಿ ತಮ್ಮ ಪ್ರಧಾನ ಕಟ್ಟಡದಲ್ಲಿ 'ಸಲಾಂ ಟು ಕಲಾಂ' ಎನ್ನುವ ಹೆಸರಿನಲ್ಲಿ ಅವರ ಜೀವನ ಪಯಣದ ಅರ್ಥಪೂರ್ಣ ಚಿತ್ರಗಳನ್ನು ವಿವರವಾದ ಟಿಪ್ಪಣಿಗಳೊಂದಿಗೆ ಪ್ರದರ್ಶಿಸಿದ್ದು ಉಲ್ಲೇಖನೀಯ. Hareeshkumar K AM(PCM) GHS HUSKURU MALAVALLI TQ MANDYA DT 571475 mobile no 9880328224 email [email protected] -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
