*                     ಕತ್ತೆ ಮಹಿಮೆ  (ಪ್ರಬಂಧ)*
                  ----------------------------------------
ಬದುಕಿದ್ದಾಗ ಕೂಡಿರ್ಲಿಲ್ಲ ಸತ್ತಾಗಾದ್ರು ಕೂಡಿರ್ರಿ ಎಂದು ಒಂದು ಮಾಡಿದ ಕತ್ತೆಯ ನೀತಿಗೆ
ನಾವಿಂದು ತಲೆ ಬಾಗಲೆಬೇಕು ಎಂದು ಊರಿನ ಹಿರಿಯನೊಬ್ಬ ಕತ್ತೆ ಕುರಿತು ಮಾತನಾಡಿದ
ಮನುಷ್ಯರಂತೂ ಕೂಡ್ಲಿಲ್ಲ ನಮ್ಮೂರ ಹೆಣಗಳಾದ್ರು ಕೂಡಿದ್ವಲ್ಲ ಎಂಬ ಹೆಮ್ಮೆ ನನ್ನದು ಎಂದು
ಪೂಜಾರಿ ಕತ್ತೆಯ ಗುಣಗಾನ ಮಾಡಿದ,ಇಂತಹ ಘನಕಾರ್ಯ ಮಾಡಿದ ಕತ್ತೆಯನ್ನು ಬಡಿದು ಸಾಯಿಸಿದ್ದು
ತರವಲ್ಲ ಇದು ತೀರ ಅಮಾನವೀಯ ಇದನ್ನು ಖಂಡಿಸುತ್ತೆನೆಂದು ಹೋರಾಟಗಾರನೊಬ್ಬ ಬಂಡಾಯವೆದ್ದ.
    ಕತ್ತೆ ಕೊಲೆ ಮಾಡಿದ ಘಾತುಕರನ್ನು ಬಂಧಿಸಿ ಶಿಕ್ಷೆ ನೀಡಿದರೆ ಕತ್ತೆಯ ಆತ್ಮಕ್ಕೆ
ಶಾಂತಿ ಲಭಿಸುತ್ತದೆಂದು ಕತ್ತೆ ಪ್ರೀಯರು ಫರ್ಮಾನು ಹೊರಡಿಸಿದ್ರು,ಸತ್ತ ಕತ್ತೆಗೆ
ಪ್ರತಿವರ್ಷ ಪುಣ್ಯತಿಥಿ ಮಾಡಿ ಸಂತಾಪ ಸೂಚಿಸಿ ಪುಣ್ಯವಂತರಾಗಬೇಕೆಂದು ಗಣ್ಯರೆಲ್ಲ ಕತ್ತೆಯ
ಏಕತೆಯನ್ನು ಕೊಂಡಾಡಿದ್ರು,ಆ ಊರಿನಲ್ಲಿ ಎರಡು ಮಸಣಗಳಿದ್ದವು ಎಡಕ್ಕೆ ತಿಮ್ಮನ ಕುಲದವರಿಗೆ
ಮೀಸಲು,ಬಲಕ್ಕೆ ಬುಲ್ಡಿ ಕುಲದವರಿಗಾಗಿ ಎಂದು ಮದ್ಯೆ ಬೇಲಿ ಬಿಗಿದಿದ್ರು ಒಂದು ವೇಳೆ
ನಡುರಾತ್ರಿ ಹೆಣಗಳೆದ್ದು ಬೇತಾಳಗಳಾಗಿ ಬಡಿದಾಡದಂತೆ ನಡವೆ ಬೇಲಿ ಹಚ್ಚಿದ್ರು, ಬದುಕಿದ್ದಾಗ
ಸುತ್ತ ಬೇಲಿ ಹಾಕ್ಕೊಂಡಂತೆ ಸತ್ತಾಗೂ ಕೂಡಿರಬಾರದೆಂದು ತಂತಿ ಬಿಗಿದು ಕೊಂಡಿದ್ರು.
 ಆ ಊರಿನ ಕತ್ತೆಯೊಂದು ಬೇಲಿ ಕಿತ್ತಿ ಸುಡುಗಾಡಿ ಒಂದು ಮಾಡಿತ್ತು,ಎರಡು ಬಣದ ಹೆಣಗಳು
ಒಂದುಗೂಡಿದವು ಆಯಾ ಕುಲದವರು ಕಿತ್ತಿದ ಬೇಲಿ ನೋಡಿ ಕತ್ತೆಯನ್ನು ಚೆನ್ನಾಗಿ ಒದ್ದರು
ಹೊಡೆತಕ್ಕೆ ತತ್ತರಿಸಿದ ಕತ್ತೆ ಸತ್ತಿತು.
 ಕತ್ತೆ ಕಳೆದು ಕೊಂಡು ಕಂಗಾಲಾದ ಅದರ ಮಾಲೀಕ ಪಂಚಾಯ್ತಿ ಮುಂದೆ ಕತ್ತೆ ಇಟ್ಟು ಹೋರಾಟ
ಮಾಡಿದ ಸತ್ತ ನನ್ನ ಕತ್ತೆಗೆ ನ್ಯಾಯ ಸಿಗುವವರೆಗೆ ಅನ್ನ ಮುಟ್ಟುವದಿಲ್ಲವೆಂದು ಪ್ರಮಾಣ
ಮಾಡಿದ,ಸುಡುಗಾಡಿ ಒಂದು ಮಾಡಿದ ಕತ್ತೆಗೆ ಬಿರುದು ಕೊಟ್ಟು ಗೌರವಿಸುವದು ಬಿಟ್ಟು ಹೊಡೆದು
ಸಾಯಿಸಿದ್ದು ಅನ್ಯಾಯ ಎಂದು ಪಂಚಾಯ್ತಿ ಮುಂದೆ ಉಪವಾಸ ಕುಳಿತ,ಊರು ಜನ ಮಾಲೀಕನಿಗೆ
ಬೆಂಬಲಿಸಿದ್ರು,ಕತ್ತೆಗೆ ಹೊಡೆದದ್ದು ಅವಮಾನ ಕತ್ತೆಗೆ ನ್ಯಾಯ ಸಿಗಲೆಬೇಕು ಎಂದು ಘೋಷಣೆ
ಕೂಗಿದ್ರು, ಶಾಲಾ ಕಾಲೇಜುಗಳು ಬಂದ್ ಮಾಡಿದ್ರು,ಯುವಕರು ಸಂಘ ಸಂಸ್ಥೆಗಳು, ಗಣ್ಯರು ಪಂಡಿತ
ಪಾಮರರು ಬೆಂಬಲಿಸಿದ್ರು, ಟೀವಿ ಮಾದ್ಯಮದವರಂತೂ "ಕತ್ತೆ ಕೊಲೆ ಎಷ್ಟು ಸರಿ" ಎಂಬ ತಲೆ
ಬರಹದಡಿ ಚರ್ಚೆಗಿಟ್ಟರು, ಸಾಹಿತಿಗಳು ವಿಚಾರವಾದಿಗಳು ಚರ್ಚೆಯಲ್ಲಿ  ಭಾಗವಹಿಸಿ ಕತ್ತೆಗೆ
ನ್ಯಾಯ ಒದಗಿಸಲು ಒತ್ತಾಯಿಸಿದ್ರು,ಇದೊಂದು ಅಪರೂಪದ ಕತ್ತೆ ಇಂತದ್ದು ನಮ್ಮೂರಲ್ಲಿರುವದು
ನಮ್ಮೆಲ್ಲರ ಭಾಗ್ಯ ಎಂದೊಬ್ಬ ಸಾಹಿತಿ,ಕುಲಗಳನ್ನು ಒಂದುಗೂಡಿಸಲು ಪ್ರಯತ್ನಿಸಿದ ಕತ್ತೆ
ನಮ್ಮೂರಿನ ಸಂತ ಎಂದ ಮತ್ತೊಬ್ಬ ವಿಚಾರವಾದಿ,ಒಬ್ಬ ರಾಜಕಾರಣಿಯಂತೂ ಒಂದು ಹೆಜ್ಜೆ ಮುಂದೆ
ಹೋಗಿ ನಮ್ಮಲ್ಲಿಲ್ಲದ ಏಕತೆ ಕತ್ತೆಯಲ್ಲಿದೆ ಎಂದು ಬಣ್ಣಿಸಿ ಪಂಚಾಯ್ತಿ ಪಕ್ಕ ಸಮಾಧಿ
ಮಾಡಬೇಕೆಂದನು ಇವನ ಮಾತು ಕೇಳಿ ಎದುರು ಕುಳಿತವನೊಬ್ಬ ಜನರ ಅನುಕಂಪ ಗಿಟ್ಟಿಸಲು ಗಳಗಳನೆ
ಅತ್ತು ಕಣ್ಣೀರಿಟ್ಟ.
ಹೋರಾಟ ಮುಂದುವರೆಯಿತು ಕತ್ತೆಯ ಮಾಲೀಕ ಊಟವಿಲ್ಲದೆ ಸೊರಗಿದ "ತರ್ಲೆ ತಿಮ್ಮ" ತನ್ನ
ಕುಲದವರು ಮಾಡಿದ ಪಾಪ ವಿಮೋಚನೆ ಗೊಳಿಸಲು ಮಾಲಿಕನ ಉಪವಾಸ ಬೆಂಬಲಿಸಿದ ಸ್ವಂತ ಹಣದಲ್ಲಿ
ಕತ್ತೆಗೊಂದು ಸಮಾಧಿ ಕಟ್ಟುವ ಭರವಸೆ ನೀಡಿದ.ಕತ್ತೆಗಾಗಿ ಊರಿಗೆ ಊರೆ ಒಂದಾಗಿದ್ದು ಕಂಡು
ತಿಮ್ಮ ಮಮ್ಮಲ ಮರುಗಿದ ಟೀವಿ,ಪೇಪರ್ ನಲ್ಲಿ ಅಳುವದನ್ನು ನೋಡಿದ ತಿಮ್ಮ ಸತ್ತ ಕತ್ತೆಯ ಮುಂದೆ
ನಿಜವಾಗ್ಲು ಅತ್ತಂತೆ ನಾಟಕ ಮಾಡಿದ, ಯಜಮಾನನಿಗೆ ಪರಿಹಾರ ಕೊಟ್ಟು ಉಪವಾಸ ಬಿಡಿಸಿದ ಕೈ
ತುಂಬ ಕೊಟ್ಟು ತನ್ನಕಡೆ ಸೆಳೆದು ಸುಮ್ಮನಿರಿಸಿದ ಆದರೆ ತಿಮ್ಮ ಮಾತ್ರ ಕತ್ತೆ ಪುರಾಣ
ಮುಂದುವರೆಸಿದ ತನ್ನ ಓಟಿನ ತೀಟೆಗಾಗಿ ಬಳಸಿದ,ಕತ್ತೆಯ ಸಾವಿಗಾಗಿ ಮಿಡಿದ ಅದರ ಕಾರ್ಯ
ಶ್ಲಾಘಿಸಿದ,ಸಮಾಜಕ್ಕೆ ಕತ್ತೆಯಂತೆ ದುಡಿದವರನ್ನು,ಮಡಿದವರನ್ನು,ಮಹನಿಯರನ್ನು ,ಕತ್ತೆಯ
ತಾಳ್ಮೆ ರೂಢಿಸಿಕೊಂಡವರನ್ನು ಕತ್ತೆ ಎಂದು ಬಿರುದು ಕೊಟ್ಟು ಸನ್ಮಾನಿಸಿ ಜನ ಮೆಚ್ಚುಗೆ
ಗಳಿಸಿದ ಊರು ಜನ್ರಿಂದ ಪಟ್ಟಿ ಎತ್ತಿ ಸಮಾಧಿ ಕಟ್ಟಿದ ಪ್ರತಿವರ್ಷ ಪರಿಸೆ ಮಾಡಿದ, ಕತ್ತೆ
ಪುರಾಣ ಹಚ್ಚಿ ಪ್ರಚಾರ ಮಾಡಿದ "ಕತ್ತೆ" ಚಿಹ್ನೆಯಡಿ ಚುನಾವಣೆಗೆ ನಿಂತ ತಾನು ಗೆದ್ದರೆ
ಕತ್ತೆ ಸಮಾಧಿಯನ್ನು ಸದ್ಭಾವನಾ ಕೇಂದ್ರ ಮಾಡುವೆನೆಂದು ಊರು ಜನ್ರಿಗೆ ಮಾತು ಕೊಟ್ಟ ಕತ್ತೆಯ
ಕಟೌಟ್ ನೊಂದಿಗೆ  ನಿಂತು ಕೈಮುಗಿದು ಓಟು ಕೇಳಿದ, ಕತ್ತೆಯ ಮಹಿಮೆ ತಿಳಿಸಿ ಮತ ಪಡೆದ ಕತ್ತೆ
ಸಮಾಧಿ ಕಟ್ಟಲು ಅಡ್ಡಿ ಪಡಿಸಿದ ಬುಲ್ಡಿಯನ್ನು ಸೋಲಿಸಿದ 'ನಾಯಿ" ಗುರುತಿನಡಿ ಮತ ಕೇಳಲು
ಹೋಗಿ ಬುಲ್ಡಿ ಈರ ಮುಗ್ಗರಿಸಿದ.
       ಗೆದ್ದ ಖುಷಿಯಲ್ಲಿ "ತರ್ಲೆ" ಸಮಾಧಿವರೆಗೆ ದೀಡು ನಮಸ್ಕಾರ ಹಾಕಿದ ಅನುಯಾಯಿಗಳಿಗೆ
ಬಿರ್ಯಾನಿ ತಿನಿಸಿ ಕುಣಿಸಿದ ಕೊಟ್ಟ ಮಾತಿನಂತೆ ಕತ್ತೆ ಸಮಾಧಿಯನ್ನು ಸದ್ಭಾವನಾ ಕೇಂದ್ರ
ಮಾಡಿದ,ಸುತ್ತ ಹತ್ತೂರಿಗೆ ಡಂಗ್ರ ಸಾರಿ ತೇರು ಎಳೆದ,ಕತ್ತೆಯ ಕಿಮ್ಮತ್ತಿನಿಂದ ತಿಮ್ಮ
ದೊಡ್ಡವನಾಗಿ ಬೆಳೆದ ತಮಗೊಂದು ದೇವರಿಲ್ಲವೆಂಬ ಕೊರಗು ತೀರಿಸಿದ್ದಾನೆಂದು ಊರಿನ "ಬಿ"
ಗ್ರೇಡ್ ಭಕ್ತರೆಲ್ಲ ತಿಮ್ಮನನ್ನು ಕೊಂಡಾಡಿದ್ರು ಕತ್ತೆಯ ರೂಪದಲ್ಲಿ ದೇವರು ಊರು
ಉದ್ದರಿಸುವನೆಂದು ತಿಮ್ಮ ಸುದ್ದಿ ಮಾಡಿದ,ಕತ್ತೆಯ ಹೆಸರಲ್ಲಿ ಕಾಲೋನಿ ನಿರ್ಮಿಸಿ ಬಡವರಿಗೆ
ಮನೆ ಹಂಚಿದ,ವಸತಿ ಗೃಹ ಕಟ್ಟಿಸಿ "ಗಾರ್ಧಬ ಗೆಸ್ಟಹೌಸ್" ಎಂದು ಹೆಸರಿಟ್ಟ ಕುಡಿಯುವ ನೀರು
ಒದಗಿಸಿ ತರ್ಲೆ ತಿಮ್ಮನ ಕೃಪೆ ಎಂದು ಬರೆಸಿದ,ತನ್ನದೊಂದು ಸರ್ಕಲ್ ನಿರ್ಮಿಸಿ ಪೋಟೊ ನೇತು
ಬಿಟ್ಟ ಗಾರ್ಧಬಾಲಯವನ್ನು ಸ್ಥಾಪಿಸಿ ಊರಿನ ತಬ್ಬಲಿ ತಾಯಂದಿರಿಗೆ ಆಶ್ರಯ ನೀಡಿ ಅನುಕಂಪ
ಗಿಟ್ಟಿಸಿದ, ಮಕ್ಕಳಿಂದ ದೂರಾದವರು,ತಾಯಿಗೆ ಕೂಳು ಹಾಕದವರು,ಮಕ್ಕಳ ಉಪಟಳಕ್ಕೆ
ಬೇಸತ್ತವರು,ವಯಸ್ಸಾದವರಿಗೆ ಗಾರ್ಧಬಾಲಯದಲ್ಲಿ ಉಚಿತ ಪ್ರಸಾದ ವ್ಯವಸ್ಥೆ ಮಾಡಿದ.
 ಮಾನವಂತರೆಂದು ಕರೆಸಿಕೊಂಡವರು,ಸಿರಿವಂತರು,ಗಣ್ಯಾತೀಗಣ್ಯರು, ತಮ್ಮ ತಾಯಂದಿರನ್ನು
ಗಾರ್ಧಬಾಲಯದಲ್ಲಿ ಸೇರಿಸಿ ದೇಣಿಗೆ ನೀಡಿ ತಿಮ್ಮನ ಕೈ ಕುಲಕಿ ಹೋಗುತ್ತಿದ್ದರು, ಹೆಂಡತಿಗೆ
ಹೆದರುವ ಗಂಡಂದಿರು ಕೂಡ ತಿಮ್ಮನ ಆಶ್ರಯದಲ್ಲಿ ಬಿಟ್ಟು ನೆಮ್ಮದಿ ಜ್ಯಾಲಿ
ಮಾಡಿದ್ದರು,ಸತ್ತರೂ ಸೇವೆಯಲ್ಲಿರುವ ಕತ್ತೆಯ ಮಹಿಮೆ ಕೇಳಿ ಭಕ್ತರ ಸಂಖ್ಯೆ ಹೆಚ್ಚಿತು,ಮೊದಲ
ಸಲ ಪರೀಕ್ಷೆ ಬರೆಯುವ ವಿದ್ಯಾರ್ಥಿ ಕತ್ತೆಯ ದರ್ಶನವಿಲ್ಲದೆ ಹೋಗುತ್ತಿರಲಿಲ್ಲ, ಮದುವೆಯಾದ
ಜೋಡಿಗಳೆಲ್ಲ ಕತ್ತೆಯ ಸಮಾಧಿ ಮುಂದೆ ಹತ್ತು ನಿಮಿಷ ನಿಂತು ತಲೆ ಬಾಗಿಸಿ ಜೋಡು ಕಾಯಿ
ಹೊಡ್ಸಿ ಧನ್ಯರಾಗುತ್ತಿದ್ರು
   ತಿಮ್ಮ ಕತ್ತೆಯ ಪ್ರತಿಮೆ ಸ್ಥಾಪಿಸಲು ಊರು ಮಂದಿ ಸಹಕಾರ ಕೇಳಿದ ಅದಕ್ಕೊಂದು ಸಮಿತಿ
ರಚಿಸಿದ ಉದಾರ ದೇಣಿಗೆ ನೀಡಿದವರಿಗೆ ಪ್ರತಿಮೆಯ ಮುಂದೆ ಸತ್ಕರಿಸಿ ಪ್ರಶಸ್ತಿ ನೀಡುವ ಆಸೆ
ತೋರಿಸಿದ "ಕತ್ತೆ" ಪ್ರಶಸ್ತಿ ಪಡೆದವರಿಗೆ ಸಮಾಜದಲ್ಲಿ ವಿಶೇಷ ಗೌರವವಿತ್ತು.
ಊರಿನ ಗಣ್ಯಾತಿಗಣ್ಯರು,ಸುಧಾರಕರು ಪ್ರಚಾರದ ಚಾಳಿಯಿದ್ದವರೆಲ್ಲ ತಿಮ್ಮನ ಹುಂಡಿಗೆ ದುಡ್ಡು
ಸುರುವಿದ್ರು "ಕತ್ತೆ" ಪ್ರತಿಮೆ ಸಿದ್ದವಾಯಿತು ಪಕ್ಕದಲ್ಲಿ ಅದರ ನೇತಾರ ತಿಮ್ಮನ ಭಾವ ಚಿತ್ರ
ಪಿಕ್ಷಾಯಿತು ಕತ್ತೆ ಗುರುತಿಲ್ಲದೆ ಓಟು ಪಡೆಯುವದು ಕಷ್ಟವಾಗಿದ್ದರಿಂದ ಊರಿನ ಪುಡಿ
ರಾಜಕಾರಣಿಗಳು ತಮ್ಮ ತಮ್ಮ ಮನೆ ಮುಂದೆ ಕತ್ತೆ ಚಿತ್ರ ಬರೆಸಿ ನಿಷ್ಠೆ ಮೆರೆದಿದ್ರು ಇನ್ನು
ಕೆಲವರು ಕತ್ತೆಯ ಶಿಷ್ಟಾಚಾರ ಬಾಳಿನಲ್ಲಿ ರೂಢಿಸಿಕೊಳ್ಳಲು ಪ್ರಯತ್ನ ಮಾಡಿದರು ಅದರಂತೆ
ಬದುಕಲು ತಯಾರಿ ನಡೆಸಿದ್ರು,ಪ್ರತಿಮೆ ಮುಂದೆ ಊರು ಜನ್ರನ್ನ ಕರೆಸಿ ಅನ್ನ ಸಂತರ್ಪಣೆ ಮಾಡಿ
ತಾವು ಕತ್ತೆ ಪ್ರೀಯರೆಂದು ರುಜುವಾತು ಮಾಡಿದ್ರು,ಇದ್ದಕ್ಕಿದ್ದಂತೆ ಕತ್ತೆಯ ಪ್ರತಿಮೆಯ
ಮುಂದೆ ದೊಡ್ಡ ಗದ್ದಲವಾಯಿತು ಅಂಗಿ ಅಂಗಿ ಹಿಡಿದು ಬಡಿದಾಡಿದ್ರು, ಕಲ್ಲು ತೂರಾಡಿ ಗ್ಲಾಸು
ಒಗೆದ್ರು ಗುಂಡಿನ ಸಪ್ಪಳವಾಯಿತು ಒಂದೆರಡು ಹೆಣಗಳು ಬಿದ್ದವು ಊರು ಬಿಕೊ ಎಂದಿತು,ಪೋಲಿಸ್ರು
ಗಸ್ತು ತಿರುಗಿದರು ಕತ್ತೆ ಸಮಾಧಿಗೆ ಬೇಲಿ ಬಿಗಿದ್ರು,ಪ್ರತಿಮೆ ಸುತ್ತ ಪೋಲಿಸ್ರು ಕಾವುಲು
ನಿಂತ್ರು ಊರು ಶಾಂತವಾಯಿತು, ಊರಿನ ತುಂಟ ನಾಯಿಯೊಂದು" ಕತ್ತೆ ಪ್ರತಿಮೆ"ಯ ಮೇಲೆ ಕಾಲೆತ್ತಿ
ಅಭಿಷೇಕ ಮಾಡುತ್ತಿತ್ತು ಇದನ್ನು ಕಂಡು ಕೆಂಡಮಂಡಲವಾದ ಕತ್ತೆ ಪ್ರೀಯನೊಬ್ಬ ನಾಯಿಗೆ
ಕಲ್ಲೊಡೆದು ಸಾಯಿಸಿದ ನಡು ಬೀದಿಯಲ್ಲಿ ಸತ್ತ ನಾಯಿ ಸುದ್ದಿ ಊರಲ್ಲಿ ಮಿಂಚಿನಂತೆ
ಹಬ್ಬಿತು,ಶ್ವಾನ ದಯಾಳು ಬುಲ್ಡಿ ಈರನ ಕಾವುಲು ನಾಯಿ ಕೊಲೆಯಾಗಿದ್ದು ಆತನ ಅನುಯಾಯಿಗಳಿಗೆ
ಸಿಟ್ಟು ತರಿಸಿತ್ತು "ನಾಯಿ" ಗುರುತಿನಡಿ ಸೋತು ಸುಣ್ಣವಾಗಿದ್ದ ಈರನಿಗೂ ಅವಮಾನವಾಗಿತ್ತು
ಕೂಡಲೆ ಕತ್ತೆ ಪ್ರತಿಮೆಯನ್ನು ದ್ವಂಸಗೊಳಿಸಿ ಸತ್ತ ನಾಯಿಯ ಸೇಡು ತೀರಿಸಿಕೊಂಡರು,ಬೇಲಿ
ಕಿತ್ತಿ ಒಂದುಗೂಡಿಸಿದ ಕತ್ತೆಯ ಪ್ರತಿಕಾರ ತೀರಿಸಲು "ಹೆಣಗಳ ವಾರಸುದಾರರು" ಕಂಡಲ್ಲಿ ಕಲ್ಲು
ತೂರಿದ್ರು ಎರಡು ಬಣಗಳ ನಡುವೆ ವೈರತ್ವ ವೆರ್ಪಟ್ಟು "ಕತ್ತೆ ಸಮಾಧಿಗೆ" ತಂತಿ ಬಿಗಿದ್ರು
ವಿವಾದ ಮುಗಿಯುವರೆಗೆ ಭಕ್ತರಿಗೆ ಕಟ್ಟಾಜ್ಞೆ ಮಾಡಿದರು,
ಶ್ವಾನ ದಯಾಳು ಬುಲ್ಡಿ ಈರ" ಸತ್ತನಾಯಿ" ರಸ್ತೆ ಗಿಟ್ಟು ನ್ಯಾಯ ಕೇಳಿದ "ನಾಯಿಗೊಂದು
ನ್ಯಾಯ,ಕತ್ತೆಗೊಂದು ನ್ಯಾಯವೇ" ಎಂದು ಪಟ್ಟು ಹಿಡಿದ, ಕತ್ತೆಗೆ ಸಿಕ್ಕ ಕಿಮ್ಮತ್ತು ನನ್ನ
ಕಾವುಲು ನಾಯಿಗೂ ಸಿಗಬೇಕು, ಎಷ್ಟೋ ಬಾರಿ ಕಳ್ಳರ ಬೆನ್ನತ್ತಿ ಊರಿನ ಮಾನ ಉಳಿಸಿದೆ ಎಂದು
ಭಾಷಣ ಬಿಗಿದ ಊರಿನ ಕುರಿಗಳು ಹೌದೌದು ಎಂದವು, ತಿಮ್ಮ ಬುಲ್ಡಿ ಈರನ ಕಿವಿಯಲ್ಲಿ ಏನೋ ಉಸಿರಿದ
ಇಬ್ಬರು ವೈಮನಸ್ಸು ಮರೆತು ಒಂದಾದರು ಕತ್ತೆ ಪುರಾಣ ತಿಪ್ಪೆಗೆ ತಳ್ಳಿ ಶ್ವಾನ ಸಂದೇಶ ಸಾರಲು
ಊರ ಜನ್ರ ಸಭೆ ಕರೆದ್ರು,ನಾಯಿ ಪುರಾಣ ಹಚ್ಚಲು ಜಾಗ ಹುಡುಕಿದ್ರು.

*                             ( ಅಜಮೀರ ನಂದಾಪುರ)*
*                            ಮುಖ್ಯೋಪಾಧ್ಯಾಯರು ಪ್ರೌಢ ಶಾಲೆ ಗಂಗಾವತಿ*

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To view this discussion on the web, visit 
https://groups.google.com/d/msgid/kannadastf/CAPHu_VagDi14maVx9dZw2mz2kUR8GRD2A3r_59wdZPypRm0E8Q%40mail.gmail.com.

Reply via email to