http://m.vijaykarnataka.com/edit-oped/columns/sudhindra-haldodderi/articleshow/60834818.cms ನೆಟ್ ನೋಟ: ಪ್ರಳಯದ ಸುದ್ದಿಯೆಂಬ ಠುಸ್ ಪಟಾಕಿ Updated Sep 27, 2017, 04:00 AM IST AAA [image: ನೆಟ್ ನೋಟ: ಪ್ರಳಯದ ಸುದ್ದಿಯೆಂಬ ಠುಸ್ ಪಟಾಕಿ]
- - - - - - ** ನೆಟ್ ನೋಟ: ಸುಧೀಂದ್ರ ಹಾಲ್ದೊಡ್ಡೇರಿ* ''ಎಲ್ಲಾ ಬೋಗಸ್ ಅಂತೀರಲ್ಲಾ, ಇದಕ್ಕೇನು ಹೇಳ್ತೀರಿ?,'' ಎಂದು ಭಾನುವಾರ ಪತ್ರಕರ್ತ ಮಿತ್ರರೊಬ್ಬರು ಪತ್ರದ ಪ್ರತಿಯೊಂದನ್ನು ನನ್ನ ಮೊಬೈಲಿಗೆ ಕಳುಹಿಸಿದ್ದರು. ಪಾರಮಾನಸ ವಿಜ್ಞಾನದಿಂದ ಭೂಮಿ ಹಾಗೂ ಬಾಹ್ಯಾಕಾಶವನ್ನು ಅಳೆಯುವ ಸಂಶೋಧನಾ ಸಂಸ್ಥೆಯೊಂದರ ನಿರ್ದೇಶಕರು ಪ್ರಧಾನಮಂತ್ರಿಗಳಿಗೆ ಬರೆದ ಪತ್ರವದು. ಕಳೆದ ಆಗಸ್ಟ್ 20ರಂದು ಈ ಸಂಸ್ಥೆಯು ಪಾರಮಾನಸಿಕ ಜ್ಞಾನದಿಂದ ಗ್ರಹಿಸಿದ ಮಾಹಿತಿಯ ಪ್ರಕಾರ ಇದೇ ವರ್ಷದ ಡಿಸೆಂಬರ್ 31ರಂದು ಹಿಂದೂ ಮಹಾಸಾಗರದ ತಳದಲ್ಲಿ ಭಾರಿ ಭೂಕಂಪನವಾಗಲಿದೆ! ಭಾರತ, ಚೀನಾ, ಪಾಕಿಸ್ತಾನ, ಜಪಾನ್ ಸೇರಿದಂತೆ ಏಷಿಯಾ ಖಂಡದ ಹನ್ನೊಂದು ರಾಷ್ಟ್ರದ ಭೂಪಟವನ್ನೇ ಬದಲಾಯಿಸಬಲ್ಲಷ್ಟು ಶಕ್ತಿ ಅದರಿಂದ ಬಿಡುಗಡೆಯಾಗಲಿದೆ. ಸುಮಾರು 120ರಿಂದ 180 ಕಿಲೋಮೀಟರ್ನಷ್ಟು (ಅಗಲವೊ, ಎತ್ತರವೊ, ಉದ್ದವೋ ಗೊತ್ತಿಲ್ಲ ? ) 'ಸೀಶ್ಮಾ' ಎಂಬ ಹೆಸರಿನ ಪ್ರಭಾವಶಾಲಿ ನೀರಿನಲೆ ಮಹಾಸಾಗರದ ತೀರವನ್ನು ಅಪ್ಪಳಿಸಲಿದೆ. ಜತೆಗೆ ಇಡೀ ತೀರ ಪ್ರದೇಶದಲ್ಲಿ ಸುನಾಮಿಯೂ ಬಂದೆರಗಬಹುದು. ಸುನಾಮಿ ಮುನ್ಸೂಚಕಗಳು, ಹವಾಮಾನ ರೇಡಾರ್ಗಳು, ಭೂಪರಿವೀಕ್ಷ ಣಾ ಉಪಗ್ರಹಗಳು, ಅಗಾಧ ಶಕ್ತಿಯ ಸೂಪರ್ ಕಂಪ್ಯೂಟರುಗಳು ಕಂಡುಹಿಡಿಯಲಾಗದ ವಿದ್ಯಮಾನವನ್ನು ಕೇರಳದ ತಿರುವನಂತಪುರದ ಲೆಟರ್ಹೆಡ್ 'ಸಂಶೋಧನಾ(?)' ಸಂಸ್ಥೆಯೊಂದು ಪತ್ತೆಹಚ್ಚಿದೆ. ಈ ಕುರಿತಂತೆ ಸಂಸ್ಥೆಯು ಬರೆದ ಪತ್ರ ಪ್ರಧಾನಮಂತ್ರಿಯವರನ್ನು ಮುಟ್ಟುವ ಮೊದಲೇ ಫೇಸ್ಬುಕ್ ಮೆಸೆಂಜರ್, ವಾಟ್ಸ್ ಆ್ಯಪ್, ಟ್ವಿಟರ್ ಸೋಶಿಯಲ್ ಮೀಡಿಯಾಗಳ ಮೂಲಕ ಜಗಜ್ಜಾಹೀರಾಗಿದೆ. ಪ್ರಸಾರದ ತುರ್ತಿನಲ್ಲಿರುವವರು ಕೇವಲ ಜನಸಾಮಾನ್ಯರಷ್ಟೇ ಅಲ್ಲ. ವಿಜ್ಞಾನ-ತಂತ್ರಜ್ಞಾನವನ್ನು (ಒಂದು ಕಾಲದಲ್ಲಿ) ಅರೆದು ಕುಡಿದ ಮಹಾ ಮಹಿಮರಿದ್ದಾರೆ. ಈ ಹಿಂದೆ ನನ್ನೊಟ್ಟಿಗೆ ಐ.ಐ.ಟಿ.ಯಲ್ಲಿ ಎಂಜಿನಿಯರಿಂಗ್ ಕಲಿತವರು ಇದೇ ಪತ್ರದ ಪ್ರತಿಯೊಂದನ್ನು ನನಗೆ ಕಳುಹಿಸಿದ್ದಾರೆ. ಡಿ.ಆರ್.ಡಿ.ಓ.ದಲ್ಲಿ ನನ್ನ ಸಹೋದ್ಯೋಗಿ ಆಗಿದ್ದವರೂ ಅದನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೇನು ಕಳೆದ ಶನಿವಾರ ಪ್ರಳಯ ಆಗಿಯೇ ಬಿಡುತ್ತದೆ ಎಂದು ಕಾದಿದ್ದ ವಿಘ್ನಸಂತೋಷಿಗಳಿಗೆ ನಿರಾಶೆಯಾಗಿದೆ. ಅದಕ್ಕೆಂದೇ ಜನರನ್ನು ಒಂದಷ್ಟು ಕಾಲ ಚಟುವಟಿಕೆಯಿಂದಿಟ್ಟಿರಲು ಡಿಸೆಂಬರ್ 31ರ ಹೊಸ ಪ್ರಳಯದ ಪಾರಮಾನಸಿಕ ಜ್ಞಾನವನ್ನು ಹಬ್ಬಿಸುತ್ತಿದ್ದಾರೆ. ಅಮೆರಿಕದಲ್ಲಿ ಖಗ್ರಾಸ ಸೂರ್ಯಗ್ರಹಣವಾದ ಮೂವತ್ಮೂರು ದಿನಗಳೊಳಗೆ 'ನಿಬಿರು' ಕ್ಷುದ್ರಗ್ರಹ ಅಥವಾ 'ಪ್ಲಾನೆಟ್ ಎಕ್ಸ್' ಗ್ರಹ ಭೂಮಿಗೆ ಬಂದಪ್ಪಳಿಸಬಹುದು ಎಂದು ಬೂಸಿ ಬಿಟ್ಟಿದ್ದ ಪ್ರಳಯಾಂತಕನೊಬ್ಬ, ಇದೀಗ ಮುಳುಗಡೆಗೆ ಹೊಸ ದಿನಾಂಕವೊಂದನ್ನು (ಅಕ್ಟೋಬರ್ 21) ನಿಗದಿ ಮಾಡಿದ್ದಾನೆ. ಅಂದು ಆರಂಭವಾಗುವ (ಮಹಾ)ಯುದ್ಧ ಸತತವಾಗಿ ಏಳು ವರ್ಷಗಳ ಕಾಲ ನಡೆದು, ಇಡೀ ಜಗತ್ತೇ ಅನಾಹುತದತ್ತ ಜಾರುತ್ತದೆಂದಿದ್ದಾನೆ. ಬೈಬಲ್ ಗ್ರಂಥದಲ್ಲಿ ಈ ಬಗ್ಗೆ ಎಲ್ಲ ಉಲ್ಲೇಖಗಳಿವೆ ಎಂದೂ ಬೊಗಳೆ ಬಿಟ್ಟಿದ್ದಾನೆ. ಈ ಬಗೆಯ ಸುದ್ದಿಗಳಿಗೆ ಸದಾ ಹಾತೊರೆಯುವ ನಮ್ಮ 24 -7 ಕನ್ನಡ ಸುದ್ದಿ ಟೀವಿ ಚಾನೆಲ್ಗಳು 'ಜಗತ್ತು ಉಳಿಯತ್ತಾ?', 'ಮುಂದಿನ ಪ್ರಳಯಕ್ಕೆ ನಾವೂ ನೀವಾ ಆಗ್ತೀವಾ ಸಾಕ್ಷಿ?', 'ಗಡಗಡ ನಡುಗುತ್ತಿರುವ ನಾಸಾ ವಿಜ್ಞಾನಿಗಳು ಇಷ್ಟು ದಿನ ಸುಮ್ಮನಿದ್ದದ್ದೇಕೆ?' ಎಂದು ಬೊಬ್ಬಿರಿಯುತ್ತಿವೆ. ಹೆಂಗಳೆಯರ ಕಣ್ಣುಗಳಲ್ಲಿ ಧಾರಾಕಾರ ಕಣ್ಣೀರು ಸುರಿಸುವ ಧಾರಾವಾಹಿಗಳನ್ನೇ ಬಂಡವಾಳ ಮಾಡಿಕೊಂಡಿರುವ ಮನರಂಜನಾ (?) ಟೀವಿ ಚಾನೆಲ್ಗಳಿಗೆ ಪೈಪೋಟಿ ನೀಡಲು ಸುದ್ದಿ ಚಾನೆಲ್ಗಳು 'ಭೀತಿ'ಯನ್ನೇ ಒಂದು 'ವಾಣಿಜ್ಯ ಸರಕನ್ನಾಗಿ'ಸಿಕೊಂಡಿವೆ. ಯಾವುದೋ ದೇಶದಲ್ಲಿ ಹಿಡಿಯುವ ಪಾಶ್ರ್ವ ಗ್ರಹಣಗಳಿಂದ ಹಿಡಿದು ಮಂಗಳವಾರದಂದೇ ಬಂದ ಸಂಕಷ್ಟ ಹರ ಚತುರ್ಥಿಯ ಫಲಾಫಲಗಳನ್ನು ಪೈಪೋಟಿಗೆ ಬಿದ್ದು ಬಿತ್ತರಿಸುತ್ತವೆ. ಈ ಪ್ರಸಂಗಗಳನ್ನು ವಿಶೇಷವಾಗಿ ಪ್ರಸ್ತಾಪಿಸುವುದಕ್ಕೆ ಕಾರಣಗಳಿವೆ. ಜಗತ್ತಿನ ನಾಲ್ಕೈದು ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ದೇಶವನ್ನು ತಂದು ನಿಲ್ಲಿಸಿರುವ ಬಾಹ್ಯಾಕಾಶ ತಂತ್ರಜ್ಞಾನ - ಅದು ತಂದುಕೊಟ್ಟಿರುವ ಮೊಬೈಲ್ ಫೋನು, ಬಹುಚಾನೆಲ್ಗಳ ಟೀವಿ ಹಾಗೂ ಇಂಟರ್ನೆಟ್ ? ಇವುಗಳ ಮೂಲಕ ಜನ್ಮಾಂತರದ ಮೌಢ್ಯವನ್ನು, ಪ್ರಳಯಾಂತಕ ಭವಿಷ್ಯವನ್ನು ಹಾಗೂ ಲೈಂಗಿಕ ಕ್ರೌರ್ಯದ ಮನರಂಜನೆಯನ್ನು ಕ್ಷ ಣಾರ್ಧದಲ್ಲಿ ಸುಲಭವಾಗಿ ಪಸರಿಸಲು ಇಂದು ಸುಲಭ ಸಾಧ್ಯವಾಗಿದೆ. ಯಾವ ಯಾವ ಗ್ರಹಗಳು ನಿಮಗೆ ಯಾವ ಅವಧಿಯಲ್ಲಿ ಕಾಟ ಕೊಡಲು ಸಿದ್ಧವಾಗಿವೆಯೆಂದು ಇಂಗ್ಲಿಷ್ ವರ್ಷದ ಆರಂಭ, ಸಂಕ್ರಾಂತಿ, ಯುಗಾದಿ ಹಾಗೂ ದೀವಳಿಗೆಯ ವಿಶೇಷ ದಿನಗಳಂದು ಫರ್ಮಾನುಗಳು ಹೊರಬೀಳುತ್ತವೆ. ಇನ್ನು ಸಂಖ್ಯಾ ಶಾಸ್ತ್ರಜ್ಞರ ಕಲ್ಪನೆಗಳಿಗೆ ಲೆಕ್ಕವೇ ಇಲ್ಲ. ಹುಟ್ಟಿದ ದಿನ, ತಿಂಗಳು, ವರ್ಷಗಳನ್ನು ಕೂಡಿ ಬಂದ ಉತ್ತರದ ಸಂಖ್ಯೆಯನ್ನು ಒಂದಕ್ಕೊಂದು ಕೂಡಿ ನಿಮ್ಮ ಅದೃಷ್ಟ ಸಂಖ್ಯೆಗೆ ಅದು ತಾಳೆಯಾಗುತ್ತದೆಯೇ ಎಂದು ಪರಿಶೀಲಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದವರು ಇಂಗ್ಲಿಷ್ ವರ್ಣಮಾಲೆಯಲ್ಲಿ ನಿಮ್ಮ ಹೆಸರಿನ ಅಕ್ಷ ರಗಳು ಯಾವ ಅನುಕ್ರಮದಲ್ಲಿ ಬರುತ್ತದೆಯೋ ಅದಕ್ಕೊಂದು ಸಂಖ್ಯೆ ನೀಡಿ, ಅವುಗಳೆಲ್ಲವನ್ನೂ ಕೂಡಿ, ಮತ್ತೆ ಕೂಡಿ ಮ್ಯಾಜಿಕ್ ಸಂಖ್ಯೆಯೊಂದನ್ನು ನಿಮಗೆ ಲಗತ್ತಿಸಿ ಅದು ನಿಮ್ಮ ರಾಶಿ-ನಕ್ಷ ತ್ರಕ್ಕೆ ಸರಿ ಹೊಂದುವುದೋ ಇಲ್ಲವೋ ಎಂದು ತನಿಖೆ ಮಾಡಿಕೊಡುತ್ತಾರೆ. ಎಲೆಕ್ಷ ನ್ ಹತ್ತಿರ ಬಂದರೆ ಯಡ್ಯೂರಪ್ಪ, ಈಶ್ವರಪ್ಪ, ಕುಮಾರಸ್ವಾಮಿ, ಸಿದ್ಧರಾಮಯ್ಯ, ಆಂಜನೇಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರ ಹುಟ್ಟಿದ ದಿನಾಂಕಗಳ ಜೊತೆಗೆ ಅವರ ಜನ್ಮರಾಶಿಯನ್ನು ಸ್ವಯಂಘೋಷಿತ ಲೆಕ್ಕಾಚಾರಶಾಸ್ತ್ರಜ್ಞರಿಗೆ ಕೊಟ್ಟು, ಯಾರಿಗೆ 'ರಾಜ ಯೋಗ'ವಿದೆ, ಮತ್ಯಾರಿಗೆ 'ಅಮರ ಯೋಗ'ವಿದೆ ಎಂಬುದನ್ನು ತಿಳಿಸಿ ವೀಕ್ಷ ಕರನ್ನು 'ಮಂಗ' ಮಾಡುತ್ತಾರೆ. ಬ್ರಹ್ಮಾಂಡವನ್ನೇ ಅರಗಿಸಿಕೊಂಡ ಕಂಟಕರಂತೂ 'ಚೂಡೀದಾರ್ ಹಾಕ್ಕೊಂಡ್ರೆ ಸೆರ್ವಿಕಲ್ ಕ್ಯಾನ್ಸರ್ ಬರೋದು ಗ್ಯಾರಂಟಿ' ಎಂದು ಘಂಟಾಘೋಷವಾಗಿ ನಿಮ್ಮ ಮಿದುಳನ್ನು ಕಲಿಸಿಹಾಕಿಬಿಡ್ತಾರೆ. ಉಳಿದಂತೆ ಫುಟ್ಪಾತ್ನಲ್ಲಿ ಕವಡೆ ಹಾಕುತ್ತಿದ್ದವರೂ 'ಲ್ಯಾಪ್ಟಾಪ್ ಕಂಪ್ಯೂಟರ್' ಮುಂದಿಟ್ಟುಕೊಂಡು, ನೀವು ಪ್ರಶ್ನೆ ಕೇಳಿದ ಸಮಯ, ನಿಮ್ಮ ಹುಟ್ಟಿದ ದಿನಾಂಕ, ಊರಿನ ಅಕ್ಷಾಂಶ-ರೇಖಾಂಶ ಎಲ್ಲಾ ಕಲಸು ಮೇಲೋಗರಕ್ಕೆ ಒಂದು ವ್ಯಾಖ್ಯಾನ ನೀಡಿ, ಯಾವ ರತ್ನದ ಉಂಗುರವನ್ನು, ಯಾವ ಬೆರಳಿಗೆ ಹಾಕಿಕೊಂಡು, ಯಾರ ಜಪ ಮಾಡಿದರೆ ನಿಮಗೆ ಉದ್ಯೋಗ, ವಿವಾಹ, ಮಕ್ಕಳು, ಮನೆ ಭಾಗ್ಯ, ರೋಗ ನಿವಾರಣೆಯಾಗುತ್ತವೆಯೆಂಬ ಸುಲಭ ಪರಿಹಾರಗಳನ್ನು ನೀಡುವ ಪಂಡಿತರಂತೆ ಪೋಸು ಕೊಡುತ್ತಾರೆ. ಬೇಕಿದ್ದರೆ ಯಾವ ಅಂಗಡಿಯಲ್ಲಿ ಯಾವ ಉಂಗುರ ಖರೀದಿಸುವುದು ಉತ್ತಮ ಎಂಬ ಕನ್ಸಲ್ಟೇಶನ್ ನೀಡುತ್ತಾರೆ. ಅದ್ಯಾವ ಗಳಿಗೆಯಲ್ಲಿ ಈ 'ವಾಟ್ಸಪ್' ಅನ್ನೋ ಸೌಲಭ್ಯ ಬಂತೋ, ದುರದೃಷ್ಟದ ದಿನಗಳು ನಮ್ಮನ್ನು ಸತತವಾಗಿ ಕಾಡುತ್ತಿವೆ. ಪುಕ್ಕಟೆ ಎಸ್ಸೆಮ್ಮೆಸ್ಗಳ ಮೂಲಕ ಹಳಸಲು ಜೋಕುಗಳ ಚಿತ್ರಾನ್ನ ಬಡಿಸುತ್ತಿದ್ದವರೆಲ್ಲರೂ ಜಾಗೃತಗೊಂಡಿದ್ದಾರೆ. ದಿನಕ್ಕೊಂದು ಗೀಗಾಬೈಟ್ ಇಂಟರ್ನೆಟ್ ಸೌಲಭ್ಯವನ್ನು 'ಜಿಯೋ' ಕಂಪನಿ ಕೊಟ್ಟ ಮೇಲಂತೂ ವೀಡಿಯೋ ಹಾವಳಿ ಹೆಚ್ಚಾಗಿದೆ. 'ಬಿ.ಬಿ.ಸಿ. ವರದಿ ಮಾಡಿದೆ. ನಾಸಾ ವೆಬ್ಸೈಟಲ್ಲಿ ಬೇಕಿದ್ರೆ ನೋಡಿ. ಇಂಥ ಗ್ರಹದಿಂದ ಹೊರಟ ವಿಕಿರಣ ಇಷ್ಟು ಹೊತ್ತಿಗೆ ಭೂಮಿಯನ್ನು ಅಪ್ಪಳಿಸುತ್ತದೆ. ಮಕ್ಕಳನ್ನು ಆಚೆ ಕಳುಹಿಸಬೇಡಿ' ಎಂಬ ಸುಳ್ಳು ಸಂದೇಶ ಒಬ್ಬರ ಮೊಬೈಲ್ ಫೋನಿಗೆ ಬಂದರೆ ಸಾಕು. ಅದನ್ನು ಪೂರ್ತಿ ಓದದೆಯೇ ನೂರು ಜನರಿಗೆ ನೂರಕ್ಕೂ ಕಡಿಮೆ ನಿಮಿಷದಲ್ಲಿ ರವಾನಿಸಲು ಹೊರಡುತ್ತಾರೆ, 'ರೇಡಿಯೇಶನ್' ಹಾಗೆಲ್ಲಾ ಇಷ್ಟು ದೂರ ಬರೋಕ್ಕೆ ಸಾಧ್ಯವಿಲ್ಲವೆಂದು ವಿಜ್ಞಾನ ತಿಳಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು. ದೊಡ್ಡ, ದೊಡ್ಡ ಸಾಫ್ಟ್ವೇರ್ ಕಂಪನಿಗಳಲ್ಲಿ ಉದ್ಯೋಗ ಮಾಡೋ ಬ್ರಿಲಿಯಂಟ್ ಜನರೂ 'ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಿಸಿಕೊಂಡ ಎರಡು ತಲೆಯ ಹಾವಿನ ಬೋಗಸ್ ಡಿಜಿಟಲ್ ಚಿತ್ರವನ್ನು' ಹತ್ತು ಜನರಿಗೆ ರವಾನಿಸಿ 'ಸರ್ಪ ಸಂಸ್ಕಾರ ದೋಷ'ವನ್ನು ಪರಿಹರಿಸಿಕೊಂಡು ಬಿಡುತ್ತಾರೆ. ಪ್ರತಿಯಾಗಿ ಅವರ ಮಿತ್ರರು 'ಕಣ್ಣು ಮಿಟುಕಿಸುವ ಶಿರಡಿ ಸಾಯಿಬಾಬ ಚಿತ್ರ', 'ಗಣೇಶ್ಜಿ, ಹನುಮಾನ್ಜಿ'ಗಳ ಚಿತ್ರ, ಸಹಸ್ರನಾಮ, ಪುಣ್ಯಕತೆ, ಹರಿಕತೆ, ಉಪಕತೆಗಳನ್ನು ಕ್ಷ ಣಾರ್ಧದಲ್ಲಿಯೇ ಹಂಚುತ್ತಾ ಹೊರಡುತ್ತಾರೆ. ಉಳಿದಂತೆ, 'ಇದು ಮೈಕ್ರೋಸಾಫ್ಟು, ಹಾಟ್ಮೇಯ್ಲ್, ಯಾಹೂ, ಜೀಮೇಯ್ಲ್ ... ಕಂಪನಿಗಳು ನಡೆಸುತ್ತಿರುವ ಸಮೀಕ್ಷೆ. ಇದರಲ್ಲಿ ಭಾಗಿಯಾಗೋ ಪ್ರತಿ ಸಾವಿರದ ವ್ಯಕ್ತಿಗೆ ಒಂದು ಲ್ಯಾಪ್ಟಾಪ್ ಕಂಪ್ಯೂಟರ್ ಇಲ್ಲವೆ ಸ್ಮಾರ್ಟ್ ಫೋನ್ ಕೊಡುಗೆಯಾಗಿ ಬರತ್ತೆ. ಮೇಯ್ಲ್ ಅನ್ನು ಮರು ರವಾನಿಸಿ' ಅನ್ನೋ ಪತ್ರ ಇ-ಮೇಲ್ ಖಾತೆಗೆ ಬಂದೊಡನೆಯೆ ಉನ್ನತ, ಮಹೋನ್ನತ, ಅತ್ಯುನ್ನತ ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಕಂಪನಿಗಳ 'ವಿಜ್ಞಾನ ಕಲಿತವರು' ಚಕಚಕನೆ ಪರಿಚಿತ ನೂರು ಜನರಿಗೆ ಫಾರ್ವರ್ಡ್ ಮಾಡುತ್ತಾರೆ. ಥೇಟ್, 'ಸಂಗವ್ವಕ್ಕನ ಮುದ್ದಿನ ಸೊಸಿ, ಬಸಿರಾದ ಸುದ್ದಿ'ಯ ರೀತಿ ಕಾಳಗಿಚ್ಚಿನಂತೆ ಅದು ಊರ ತುಂಬೆಲ್ಲಾ ಹಬ್ಬುತ್ತದೆ. ನಮ್ಮ ಸಾಧನೆ, ಕೇವಲ ವಿಜ್ಞಾನ ಕಲಿಯುವುದಷ್ಟೇ ಅಲ್ಲ, ಉತ್ತಮ ಅಂಕಗಳನ್ನು ಪಡೆದು, ಉನ್ನತ ಪದವಿಗಳನ್ನು ಗಳಿಸಿ, ಪರಮೋಚ್ಛ ಉದ್ಯೋಗ ಹಿಡಿಯುವುದಷ್ಟೇ ಅಲ್ಲ, ಅವೆಲ್ಲವನ್ನೂ ಮೀರಿ ಸಮುದಾಯದ ಪ್ರಗತಿಯತ್ತ ಸಾಗಬೇಕು. ಬುರುಡೆ ಸಂಗತಿಗಳನ್ನು ಯಾವ ವಿವೇಚನೆಯೂ ಇಲ್ಲದೆ ಹಂಚುತ್ತಾ ಹೋಗುವ ಚಟವನ್ನು ಬಿಡಬೇಕು. ನಮ್ಮ ಸಂಪರ್ಕ ಸೌಕರ್ಯವು ವಿಜ್ಞಾನ ಕಲಿಯಲು, ಅರಿಯಲು ಅವಕಾಶವಿರದವರನ್ನು ಜಾಗೃತಗೊಳಿಸುವಂತಾಗಬೇಕು. ಪ್ರಳಯವಾಗುವುದು ದಿಟವೇ ಆದಲ್ಲಿ, ಅದನ್ನು ತಪ್ಪಿಸುವುದು ನಿಮ್ಮ ಟೀವಿ ಚಾನೆಲ್ಗಳ ಸ್ವಯಂಘೋಷಿತ ಗುರುಗಳೂ ಸೇರಿದಂತೆ ಯಾರಿಗೂ ಸಾಧ್ಯವಿಲ್ಲ. ಇಂತದೊಂದು ಎಚ್ಚರಿಕೆಯಿಂದ ನಮಗೆ ಬಂದ ಮಾಹಿತಿಯನ್ನು ಹಂಚಿಕೊಳ್ಳುವುದು ಲೇಸು. ಮೌಢ್ಯಬಿತ್ತುವ ಟೀವಿ ಕಾರ್ಯಕ್ರಮಗಳು ಯಾವುದೇ ಸಮಯದಲ್ಲಿ ಬಿತ್ತರವಾದರೂ ಚಕ್ಕೆಂದು ಆರಿಸಿ, ಮನೆಮಂದಿಯನ್ನು, ವಿಶೇಷವಾಗಿ ಮಕ್ಕಳನ್ನು ಬೇರೆ ಉಪಯುಕ್ತ ಕಾರ್ಯಕ್ರಮಗಳತ್ತ ಗಮನ ಹರಿಸುವಂತೆ ಮಾಡಿ. Hareeshkumar K GHS Huskuru Malavalli TQ Mandya Dt 9880328224 -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
